ಭಾರತದ ಮತದಾನ ಪ್ರಕ್ರಿಯೆಗೆ ವಿಶ್ವ ಮನ್ನಣೆಯಿದೆ : ಎ.ಸಿ. ಕೃಷ್ಣಮೂರ್ತಿ
ಮತದಾನ ಜಾಗೃತಿ ಕಾರ್ಯಕ್ರಮ
ಪುತ್ತೂರು: ಪ್ರಪಂಚದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನಡೆಯುವ ಮತದಾನ ಪ್ರಕ್ರಿಯೆಗೆ ಅಮೇರಿಕಾದಂತಹ ರಾಷ್ಟ್ರಗಳೇ ತಲೆದೂಗಿವೆ. ಇಲ್ಲಿ ಅತ್ಯಂತ ಪಾರದರ್ಶಕವಾಗಿ ಚುನಾವಣೆಗಳು ನಡೆಯುತ್ತವೆ. ಅದರಲ್ಲೂ ಈಗ ಆಧುನಿಕ ಮತಯಂತ್ರಗಳು ಬಂದಿರುವುದರಿಂದ ಚುನಾವಣಾ ಪ್ರಕ್ರಿಯೆ ಸುಲಭ ಮತ್ತು ವೇಗವೆನಿಸಿದೆ. ಆದರೆ ಪ್ರತಿಯೊಬ್ಬರೂ ಮತದಾನದಲ್ಲಿ ಭಾಗಿಯಾಗುವುದು ಅಗತ್ಯ ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮಿಷನರ್ ಕೃಷ್ಣಮೂರ್ತಿ ಎಚ್.ಕೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಶನಿವಾರ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ನೀಡಿದರು.
ಚುನಾವಣೆಯಲ್ಲಿ ಮತ ಚಲಾಯಿಸುವುದು ಪ್ರತಿಯೊಬ್ಬರ ಜವಾಬ್ಧಾರಿ. ಹಾಗೆಯೇ ಅದನ್ನು ಅತ್ಯಂತ ಗುಪ್ತವಾಗಿ ನಡೆಸಬೇಕಾದ್ದೂ ನಮ್ಮ ಕರ್ತವ್ಯ. ಆಧುನಿಕ ವ್ಯವಸ್ಥೆಗಳು ಮತದಾನದ ಗೌಪ್ಯತೆಯನ್ನು ಕಾಪಾಡುವುದಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಿವೆ. ಇವಿಎಂ ಯಂತ್ರವನ್ನು ತಮಗೆ ಬೇಕಾದಂತೆ ಬದಲಾಯಿಸಿ ಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಆ ರೀತಿಯ ತಂತ್ರಜ್ಞಾನವನ್ನು ಅದರಲ್ಲಿ ಅಳವಡಿಸಲಾಗಿದೆ. ಈವರೆಗೂ ಅದನ್ನು ಬೇಧಿಸಲು ಯಾರಿಗೂ ಸಾಧ್ಯವಾಗಿಲ್ಲ ಎಂದು ಹೇಳಿದರು.
ಹಿಂದೆಲ್ಲಾ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಲಾಗುತ್ತಿತ್ತು. ಇದರಿಂದಾಗಿ ಮತ ಎಣಿಕೆಗೆ ಒಂದೆರಡು ದಿನಗಳೇ ಬೇಕಾಗುತ್ತಿದ್ದವು. ಆದರೆ ಈಗಿನ ಇವಿಎಂ ಯಂತ್ರಗಳಿಂದಾಗಿ ಒಂದೆರಡು ಗಂಟೆಗಳಲ್ಲೇ ಫಲಿತಾಂಶ ದಾಖಲಾಗಿ ಬಿಡುತ್ತದೆ. ಜೊತೆಗೆ ಕಳೆದ ಬಾರಿಯ ಚುನಾವಣೆಯಿಂದ ವಿವಿಪ್ಯಾಟ್ ಅನ್ನುವ ವ್ಯವಸ್ಥೆಯೂ ಬಂದಿದೆ. ಇದರಿಂದಾಗಿ ತಾನ ಚಲಾಯಿಸಿದ ಮತ ಯಾರಿಗೆ ದೊರೆತಿದೆ ಎಂಬುದೂ ತಕ್ಷಣವೇ ಮತದಾರನಿಗೆ ತಿಳಿಯಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪುತ್ತೂರು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್, ಉಪತಹಶೀಲ್ದಾರ್ ಶ್ರೀಧರ್ ಕೋಡಿಜಾಲ್, ಮತದಾನ ಮಾಹಿತಿ ತರಬೇತುದಾರ ಪ್ರಶಾಂತ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ವಿದ್ಯಾ ಎಸ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.