ಬೈಕ್ಗೆ ಬಸ್ ಢಿಕ್ಕಿ ಹೊಡೆದು ಸವಾರ ಸಾವು ಪ್ರಕರಣ: ಅಪರಾಧಿಗೆ 6 ತಿಂಗಳು ಜೈಲು ಶಿಕ್ಷೆ
ಮಂಗಳೂರು, ಮಾ.16: ನಗರದ ತಾರೆತೋಟ ಕ್ರಾಸ್ನಲ್ಲಿ ಅತಿ ವೇಗದಿಂದ ಬಸ್ ಚಲಾಯಿಸಿ ಬೈಕ್ಗೆ ಢಿಕ್ಕಿ ಹೊಡೆದು ಓರ್ವನ ಸಾವಿಗೆ ಕಾರಣನಾದ ಬಸ್ ಚಾಲಕ ನೀರುಮಾರ್ಗ ಮೇರ್ಲಪದವು ನಿವಾಸಿ ಲತೀಶ್ ಕುಮಾರ್ (36) ಎಂಬಾತನಿಗೆ 6 ತಿಂಗಳು ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಸ್ ಚಲಾಯಿಸಿರುವುದಕ್ಕೆ ಐಪಿಸಿ ಸೆಕ್ಷನ್ 279ಕ್ಕೆ 2 ತಿಂಗಳು ಜೈಲು ಹಾಗೂ 1 ಸಾವಿರ ರೂ. ದಂಡ, ಗಂಭೀರ ಗಾಯ ಮಾಡಿರುವುದಕ್ಕೆ ಐಪಿಸಿ ಸೆಕ್ಷನ್ 338ಕ್ಕೆ 2 ತಿಂಗಳು ಜೈಲು, 1 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ ಮತ್ತೆ 15 ದಿನ ಜೈಲು, ಸಾವಿಗೆ ಕಾರಣವಾಗಿರುವುದಕ್ಕೆ ಐಪಿಸಿ ಸೆಕ್ಷನ್ 304ಕ್ಕೆ 6 ತಿಂಗಳು ಜೈಲು, 3 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ 1 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ಪ್ರಕರಣ ಹಿನ್ನೆಲೆ: 2013ರ ಮೇ 9ರಂದು ನಗರದ ಶೇಖ್ ಆಫ್ಟಿಕಲ್ ಮಾಲಕ ದೀಪಕ್ ಅವರನ್ನು ಸಹಸವಾರರನ್ನಾಗಿಸಿಕೊಂಡು ಅಲ್ಲಿ ಕೆಲಸ ಮಾಡುವ ಪ್ರಜ್ವಲ್ (26) ಬೈಕ್ ಚಲಾಯಿಸಿಕೊಂಡು ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಹೋಗುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಲ್ಲಿ ಲತೀಶ್ ಕುಮಾರ್ ಅತಿ ವೇಗವಾಗಿ ಚಲಾಯಿಸಿಕೊಂಡು ಬಂದ ಬಸ್ ಢಿಕ್ಕಿ ಹೊಡೆದಿತ್ತು. ಈ ಸಂದರ್ಭ ದೀಪಕ್ ಅವರ ಹೊಟ್ಟೆಯ ಮೇಲೆ ಬಸ್ನ ಬಲ ಹಿಂಭಾಗದ ಚಕ್ರ ಚಲಿಸಿ ಗಂಭೀರ ಗಾಯಗೊಂಡಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ 1 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.
ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಮಂಜುನಾಥ ಆರ್. ಅವರು ಸಾಕ್ಷಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ವಾದಿಸಿದ್ದರು.