ಚುನಾವಣಾ ಪೂರ್ವ ಸಿದ್ಧತೆ; ಪರಿಶೀಲನಾ ಸಭೆ
ಮಂಗಳೂರು, ಮಾ.16: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳು ಸಮಯಮಿತಿಯೊಳಗೆ ನಿಗದಿತ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿರುವುದನ್ನು ಪರಿಶೀಲಿಸಲು ಜಿಲ್ಲಾ ಚುನಾವಣಾ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಪರಿಶೀಲನಾ ಸಭೆ ನಡೆಯಿತು.
ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಮಾನವ ಸಂಪನ್ಮೂಲ ಹಾಗೂ ಸಾಮಗ್ರಿ ಒದಗಿಸುವಿಕೆ ಕುರಿತು, ಬ್ಯಾಲೆಟ್ ಪೇಪರ್ಸ್, ಎಲ್ಲರಿಗೂ ಮತಚಲಾವಣೆಗೆ ಅವಕಾಶ ನೀಡಲು ಇಡಿಸಿ (ಚುನಾವಣಾ ಕರ್ತವ್ಯ ಪ್ರಮಾಣಪತ್ರ) ನೀಡುವ ಬಗ್ಗೆ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು.
ವಿಕಲಚೇತನ ಮತದಾರರಿಗೆ ಸೌಲಭ್ಯ ಒದಗಿಸಲು ಸ್ವೀಪ್ ಸಮಿತಿಯ ಪ್ರತಿನಿಧಿಗಳ ಜೊತೆ ಸಮನ್ವಯ ಸಾಧಿಸಲು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳಿಗೆ ತರಬೇತಿ ಆಯೋಜನೆ ಒಳಗೊಂಡಂತೆ ಪ್ರಕ್ರಿಯೆಗಳು ಸಮಯಮಿತಿಯೊಳಗೆ ನಡೆಯುತ್ತಿರುವುದನ್ನು ಜಿಲ್ಲಾ ಚುನಾವಣಾಧಿಕಾರಿ ಖಾತರಿ ಪಡಿಸಿಕೊಂಡರು.
ಅಪರ ಜಿಲ್ಲಾಧಿಕಾರಿ ಆರ್.ವೆಂಕಟಾಚಲಪತಿ ಮತ್ತು ಎಲ್ಲ ವಿಭಾಗದ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.