ಬಸ್ಸಿನಲ್ಲಿರಿಸಿದ ಚಿನ್ನಾಭರಣ ಸಹಿತ ಬ್ಯಾಗ್ ಕಳವು
ಬೈಂದೂರು, ಮಾ.16: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ದಂಪತಿಯ ಬ್ಯಾಗ್ನಲ್ಲಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ಉಪ್ಪುಂದ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮಂಗಳೂರು ಪಕ್ಷಿಕೆರೆಯ ಸುನೀಲ್ ಪೂಜಾರಿ ಹಾಗೂ ಅವರ ಪತ್ನಿ ಅರ್ಚನಾ ಎಂಬವರು ಮಾ.15ರಂದು ರಾತ್ರಿ ಪುಣೆಯಿಂದ ವಿಅರ್ಎಲ್ ಕಂಪೆನಿಯ ಬಸ್ಸಿನಲ್ಲಿ ಮಂಗಳೂರಿಗೆ ಹೊರಟಿದ್ದರು. ಮಾ.16ರಂದು ಬೆಳಿಗ್ಗೆ ಬಸ್ ಉಪ್ಪುಂದ ಎಂಬಲ್ಲಿ ಚಾ ಕುಡಿಯಲು ನಿಲ್ಲಿಸಿತ್ತು. ಆಗ ದಂಪತಿ ಬಸ್ಸಿನಿಂದ ಇಳಿದು ಹೋಟೆಲ್ ಹೋಗಿ ಚಾ ಕುಡಿದು ವಾಪಾಸು ಬಂದು ನೋಡಿದಾಗ ಬ್ಯಾಗಿನ ಜಿಪ್ ತೆರೆದಿರುವುದು ಕಂಡು ಬಂತು.
ಪರಿಶೀಲಿಸಿದಾಗ ಬ್ಯಾಗಿನಲ್ಲಿಟ್ಟಿದ್ದ ಬಾಕ್ಸ್ ಕಳವಾಗಿತ್ತು. ಅದರಲ್ಲಿ ಎರಡು ನೆಕ್ಲೇಸ್, ಒಂದು ಜೊತೆ ಕಿವಿಯ ಓಲೆ ಮತ್ತು ಜುಮ್ಕಿ, ಲಕ್ಷ್ಮೀ ಪದಕ ಇರುವ ಚಿನ್ನದ ಸರಗಳಿದ್ದು, ಅವುಗಳ ಒಟ್ಟು ಮೌಲ್ಯ 1.62ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story