ಮಹಬೂಬ್ ಖಾನ್ಗೆ ಗೌರವ ಡಾಕ್ಟರೇಟ್ ಪ್ರದಾನ
ಬೆಂಗಳೂರು, ಮಾ.16: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ಹಿರಿಯ ಸಮಾಜ ಸೇವಕ ಮಹಬೂಬ್ ಖಾನ್ ಯಾನೆ ಬಾಷಾ ಖಾನ್(86) ಅವರಿಗೆ ಸಂತ ಮದರ್ ತೆರೇಸಾ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಷನ್ ವತಿಯಿಂದ ಗೌರವ ಡಾಕ್ಟರೇಟ್ ಹಾಗೂ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶನಿವಾರ ನಗರದ ರೇಸ್ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಜೇಮ್ಸ್ ಫ್ರಾನ್ಸಿಸ್ ಕೆರ್, ಮುಖ್ಯಸ್ಥ ಡಾ.ಮುಹಮ್ಮದ್ ಸಯೀದ್, ಡಾ.ಹಿಸಾಮುದ್ದೀನ್ ಪಾಪಾ ಹಾಗೂ ವಿಜ್ಞಾನಿ ಡಾ.ಪ್ರಭಾಕರನ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಮಹಬೂಬ್ ಖಾನ್ ಹಿನ್ನೆಲೆ: ಮಹಬೂಬ್ ಖಾನ್ ಮೂಲತಃ ಕೃಷಿಕ ಕುಟುಂಬದವರಾಗಿದ್ದಾರೆ. 50 ವರ್ಷಗಳ ಹಿಂದೆ ಜನಸಾಮಾನ್ಯರನ್ನು ಕಾಡಿದ್ದ ಮಹಾಮಾರಿ ಪ್ಲೇಗ್ ರೋಗದಿಂದಾಗಿ ಅವರ ಇಡೀ ಗ್ರಾಮವೇ ಬಾಧಿತವಾಗಿತ್ತು. ಆ ಸಂದರ್ಭದಲ್ಲಿ ಸುಮಾರು ಒಂದು ವರ್ಷಗಳ ಕಾಲ ಇಡೀ ಗ್ರಾಮಕ್ಕೆ ಅನ್ನದಾನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟವರು. ಅಷ್ಟೇ ಅಲ್ಲದೆ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಕಲ್ಪಿಸಿಕೊಡಲು ತಮ್ಮ ಒಡೆತನದ 14 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ.
ಪ್ಲೇಗ್ ರೋಗದಿಂದ ಜನಸಾಮಾನ್ಯರು ಅನುಭವಿಸಿದ ಯಾತನೆಯನ್ನು ಕಣ್ಣಾರೆ ಕಂಡ ಮಹಬೂಬ್ ಖಾನ್, ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ವೈದ್ಯರನ್ನಾಗಿಸಿ, ಬಡ ಹಾಗೂ ನಿರ್ಗತಿಕರ ಸೇವೆ ಸಲ್ಲಿಸಲು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಈಗಲೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಬಡವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಾ ಬಂದಿದ್ದಾರೆ.
ಎಲೆ ಮರೆ ಕಾಯಿಯಂತೆ, ಯಾವುದೇ ಪ್ರಚಾರದ ಅಪೇಕ್ಷೆಯಿಲ್ಲದೆ ದಶಕಗಳಿಂದ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಮಹಬೂಬ್ ಖಾನ್ ಅವರ ನಿಸ್ವಾರ್ಥ ಸೇವಾ ಮನೋಭಾವನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಹಾಗೂ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮಹಬೂಬ್ ಖಾನ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿರುವುದಕ್ಕೆ ಇಂಡೋ ಸನ್ರೈಸ್ ಇಂಟರ್ನ್ಯಾಷನಲ್ ಶಾಲೆ, ಸ್ಕೈ ಡಯಾಗ್ನಸ್ಟಿಕ್ ಸೆಂಟರ್ ಪದಾಧಿಕಾರಿಗಳು ಹಾಗೂ ಅವರ ಕುಟುಂಬ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಇವರ ಜೊತೆಯಲ್ಲಿ ಲೇಖಕ ಡಾ.ಫ್ರಾನ್ಸಿಸ್ ಕ್ಸೇವಿಯರ್, ಡಾ.ಬಿ.ಜಿ.ರಂಗನಾಥ್, ಡಾ.ಆಸಿಫ್ ಸೇಠ್(ಪೆಟ್ರೋಲ್ ಅಂಕಲ್) ಸೇರಿದಂತೆ ಇನ್ನಿತರರಿಗೂ ಪ್ರಶಸ್ತಿ ಹಾಗೂ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ವಿಜಯ ಸರಸ್ವತಿ, ಡಾ.ದಾವೂದ್ ಇಕ್ಬಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.