ಮೆಲ್ಕಾರ್: ಜೂಜಾಟದ ಅಡ್ಡೆಗೆ ಪೊಲೀಸ್ ದಾಳಿ; 70 ಮಂದಿ ಸೆರೆ, ಸೊತ್ತು ವಶ
ಬಂಟ್ವಾಳ, ಮಾ. 16: ಜೂಜಾಟದ ಅಡ್ಡೆವೊಂದಕ್ಕೆ ಬಂಟ್ವಾಳ ಪೊಲೀಸರು ದಾಳಿ ನಡೆಸಿ, ಕ್ಲಬ್ ಮ್ಯಾನೇಜರ್ ಸಹಿತ 70 ಮಂದಿಯನ್ನು ಬಂಧಿಸಿ, ಲಕ್ಷಾಂತರ ರೂ. ಸೊತ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಮೆಲ್ಕಾರ್ ಕ್ಲಬ್ವೊಂದರಲ್ಲಿ ಶನಿವಾರ ನಡೆದಿದೆ.
ಮೇಲ್ಕಾರ್ ಸಮೀಪದ ಪಾಣೆಮಂಗಳೂರಿನಲ್ಲಿ 'ಬಂಟ್ವಾಳ ರೀಕೃಷಿಯೇಷನ್ ಕ್ಲಬ್'ನಲ್ಲಿ ಅನಧಿಕೃತವಾಗಿ ಹಣವನ್ನು ಪಣವಾಗಿಟ್ಟು ಜೂಜಾಟ ತೊಡಗಿದ್ದು, ಈ ಬಗ್ಗೆ ಖಚಿತ ಮಾಹಿಯ ಮೇರೆಗೆ ಬಂಟ್ವಾಳ ನ್ಯಾಯಾಧೀಶರ ಅನುಮತಿ ಪಡೆದು ಎಎಸ್ಪಿ ಸೈದುಲು ಅಡಾವತ್ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಜಿಲ್ಲಾ ಎಸ್ಪಿ ಅವರು ತಿಳಿಸಿದ್ದಾರೆ.
ನಗದು-ಸೊತ್ತು ವಶ
ದಾಳಿಯ ವೇಳೆ ಜೂಜಾಟಕ್ಕಿಟ್ಟಿದ್ದ 72,100 ರೂ. ನಗದು, 1 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 51 ಮೊಬೈಲ್ಗಳು ಹಾಗು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾಸರಗೋಡಿನ ಮಂಜೇಶ್ವರ ನಿವಾಸಿ, ಕ್ಲಬ್ ನಡೆಸುತ್ತಿದ್ದ ಮ್ಯಾನೇಜರ್ ಸಾಯಿ ಕಿರಣ್ (37) ಎಂಬಾತನ್ನು ವಶಕ್ಕೆಪಡೆದು ವಿಚಾರಣೆ ಮಾಡಲಾಗಿದೆ. ಆದರೆ, ಈ ಕ್ಲಬ್ಗೆ ಯಾವುದೇ ಪರವಾನಿಗೆ ಇಲ್ಲವೆಂಬುವುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಕಾರ್ಯಾಚರಣೆಯಲ್ಲಿ ಎಸ್ಸೈಗಳಾದ ಚಂದ್ರಶೇಖರ್, ಸುಧಾಕರ ತೋನ್ಸೆ ಮಂಜುನಾಥ್ ಹಾಗೂ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.