ಮಂಗಳೂರು: ಬಂದರಿನಲ್ಲಿ ತಮಿಳುನಾಡು ಮೂಲದ ಕಾರ್ಮಿಕನ ಕೊಲೆ
ಮಂಗಳೂರು, ಮಾ.17: ನಗರದ ಅಝೀಝುದ್ದೀನ್ ರಸ್ತೆಯ ಬದಿಯಿರುವ ಟೆಂಪೋ ಪಾರ್ಕಿಂಗ್ ಜಾಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ರವಿವಾರ ನಡೆದಿದೆ.
ಮೃತನು ಸುಮಾರು 35ರಿಂದ 40 ವರ್ಷದ ವ್ಯಕ್ತಿಯಾಗಿದ್ದು, ಈತನ ಕೈಯ ತೋಳಿನಲ್ಲಿ ‘ಜಗ್ಗರಾವ್’ ಎಂದು ಹಚ್ಚೆ ಹಾಕಲಾಗಿತ್ತು. ಬೇರೆ ಯಾವುದೇ ಮಾಹಿತಿ ಲಭಿಸಿಲ್ಲ.
ರವಿವಾರ ಬೆಳಗ್ಗೆ 9 ಗಂಟೆಗೆ ಅಝೀಝುದ್ದೀನ್ ರಸ್ತೆಯ ಬದಿಯಲ್ಲಿರುವ ಟೆಂಪೋಗಳನ್ನು ಪಾರ್ಕಿಂಗ್ ಮಾಡಿರುವ ಸ್ಥಳದಲ್ಲಿ ಬ್ಯಾಂಕ್ವೊಂದರ ಕಚೇರಿ ಕಟ್ಟಡದ ಬಳಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತದೇಹವನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದರು.
ವ್ಯಕ್ತಿಯನ್ನು ಮಾ.16ರ ರಾತ್ರಿಯಿಂದ ಮಾ.17(ರವಿವಾರ) ರಂದು ಬೆಳಗ್ಗೆಯ ಮಧ್ಯೆ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ಕೊಲೆಗೈದಿದ್ದಾರೆ. ದುಷ್ಕರ್ಮಿಗಳು ಕೊಲೆ ಮಾಡುವ ಉದ್ದೇಶದಿಂದ ಮುಖಕ್ಕೆ ಹಾಗೂ ತಲೆಗೆ ಕಲ್ಲುಗಳನ್ನು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಮಂಗಳೂರು ನಗರ ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಮಿಕರ ಕೃತ್ಯ?: ಈ ಪ್ರದೇಶದಲ್ಲಿ ಮೀನುಗಾರಿಕೆ, ಗೂಡ್ಶೆಡ್ಡೆಯ ಸಮೀಪ ಕೆಲಸ ಮಾಡುತ್ತಿರುವ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಮೂಲಕ ಕೊಲೆಯಾದವನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಚಹರೆ: 5.7 ಎತ್ತರ, ಕಪ್ಪು ಬಣ್ಣದ ಸುಮಾರು ಎರಡು ಇಂಚು ಉದ್ದದ ತಲೆ ಕೂದಲು, ತೆಳು ಗಡ್ಡ, ಕಪ್ಪು ದಪ್ಪ ಮೀಸೆ, ಹಳೆಯ ಸ್ಲೇಟ್ ಬಣ್ಣ ಅರ್ಧ ತೋಳಿನ ಟೀಶರ್ಟ್ ಹಾಗೂ ಲುಂಗಿ, ಹಣೆಯ ಎಡ ಬದಿಯಲ್ಲಿ, ಎಡ ಕಣ್ಣಿನ ಬದಿಯಲ್ಲಿ, ಗದ್ದದಲ್ಲಿ ಜಜ್ಜಿದ ಗಾಯಗಳಿವೆ. ಕೊಲೆಯಾದ ವ್ಯಕ್ತಿಯ ಗುರುತು ಸಿಕ್ಕರೆ ಪಾಂಡೇಶ್ವರ ಪೊಲೀಸ್ ಠಾಣೆ ಅಥವಾ ನಗರ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬಹುದಾಗಿದೆ.
ಕೂಳೂರು: ಅಪರಿಚಿತ ಶವ ಪತ್ತೆ
ಕೂಳೂರು ಸೇತುವೆ ಬಳಿ ಸುಮಾರು 35ರಿಂದ 40ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ.
ಶನಿವಾರ ಸಂಜೆ 7ಗಂಟೆ ಸುಮಾರಿಗೆ ಕೂಳೂರು ಸೇತುವೆಯ ಬಳಿ ಗುರುಪುರ ನದಿಯ ದಕ್ಷಿಣ ಬದಿಯ ದಂಡೆಯಲ್ಲಿ ಮೃತ ಶರೀರ ಪತ್ತೆಯಾಗಿದೆ. ಈ ವ್ಯಕ್ತಿ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನದಿ ಅಥವಾ ಸಮುದ್ರಕ್ಕೆ ಹಾರಿ ಮೃತಪಟ್ಟಿರಬಹುದೆಂದು ಸಂಶಯಿಸಲಾಗಿದೆ.
ಚಹರೆ: ನೀಲಿ ಬಣ್ಣದ ಶರ್ಟ್, ಬೂದು ಬಣ್ಣದ ಪ್ಯಾಂಟ್ ಧರಿಸಿದ್ದು, ಎತ್ತರ ಸುಮಾರು 5.5 ಅಡಿ, ದುಂಡು ಮುಖ ಹೊಂದಿದ್ದಾರೆ. ಮೃತ ವ್ಯಕ್ತಿಯ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.
ಮೃತನ ವ್ಯಕ್ತಿಯ ಗುರುರು ಸಿಕ್ಕರೆ ಪೊಲೀಸ್ ಕಾವೂರು ಪೊಲೀಸ್ ಠಾಣೆ ಅಥವಾ ನಗರ ಕಂಟ್ರೋಲ್ ರೂಂಗೆ ಮಾಹಿತಿ ನೀಡಬಹುದುದಾಗಿದೆ.