ಲಂಚ ಸ್ವೀಕಾರ: ಆರ್ಟಿಒ ಸಹಿತ ಇಬ್ಬರಿಗೆ ನ್ಯಾಯಾಂಗ ಬಂಧನ
ಉಡುಪಿ, ಮಾ.17: ಬೆಂಕಿ ಅವಘಡದಿಂದ ಸುಟ್ಟು ಹೋದ ಕಾರೊಂದರ ರಸ್ತೆ ತೆರಿಗೆ ಮರುವಾಪತಿ ಸಂಬಂಧ ಮಾ.16ರಂದು ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರಿಂದ ಬಂಧಿಸಲ್ಪಟ್ಟ ಉಡುಪಿ ಉಪಸಾರಿಗೆ ಆಯುಕ್ತ ಹಾಗೂ ಜಿಲ್ಲಾ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ.ವರ್ಣೇಕರ್ (56) ಮತ್ತು ಮಧ್ಯವರ್ತಿ ಮುನಾಫ್ (35) ಎಂಬವರನ್ನು ಎರಡು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರ್ಟಿಒ ಕಚೇರಿಯಲ್ಲಿ ರಾತ್ರಿವರೆಗೂ ನಡೆದ ಪರಿಶೀಲನೆ ಬಳಿಕ ಎಸಿಬಿ ಪೊಲೀಸರು ಆರೋಪಿಗಳಿಬ್ಬರನ್ನು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಷಿ ಅವರ ನಿವಾಸದ ಮುಂದೆ ಹಾಜರುಪಡಿಸಿ ದರು. ನ್ಯಾಯಾಧೀಶರು ಆರೋಪಿಗಳಿಗೆ ಮಾ.18ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದರು.
ಬಳಿಕ ಅವರಿಬ್ಬರನ್ನು ಪೊಲೀಸರು ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ದರು. ಸೋಮವಾರ ಆರೋಪಿಗಳನ್ನು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.
ಆರ್ಟಿಒ ಕಚೇರಿಗೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ ಎಸಿಬಿ ಪೊಲೀಸರಿಗೆ ಲಂಚದ ಹಣ ಮಾತ್ರವಲ್ಲದೆ ಹೆಚ್ಚುವರಿಯಾಗಿ 30,000 ರೂ. ಹಣ ಪತ್ತೆಯಾಗಿದೆ. ಇವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಕಾರ್ಕಳದ ವಿಘ್ನೇಶ್ ಎಂಬವರ ಕಾರಿನ ರಸ್ತೆ ತೆರಿಗೆಯ ಹಣ ವಾಪಾಸ್ಸು ಪಡೆಯಲು ಲಂಚ ಸ್ವೀಕರಿಸುತ್ತಿದ್ದ ಇವರಿಬ್ಬರನ್ನು ಉಡುಪಿ ಎಸಿಬಿ ಪೊಲೀಸರು ಬಂಧಿಸಿ, ಲಂಚದ ಹಣ 4000 ರೂ.ವನ್ನ ವಶಪಡಿಸಿಕೊಂಡಿದ್ದರು.