ಮಂಗಳೂರು: ಟಿ.ಸಿ. ವೆಲ್ಫೇರ್ ಫೌಂಡೇಶನ್ನಿಂದ ಐದು ಜೋಡಿ ಸಾಮೂಹಿಕ ವಿವಾಹ
ಮಂಗಳೂರು, ಮಾ.17: ನಗರದ ಬಂದರ್ ಬೀಬಿ ಅಲಾಬಿ ರಸ್ತೆಯ ಖಾದರ್ ಶಾ ವಲಿಯುಲ್ಲಾ ದರ್ಗಾದ ವಠಾರದಲ್ಲಿ ಟಿ.ಸಿ. ವೆಲ್ಫೇರ್ ಫೌಂಡೇಶನ್ ವತಿಯಿಂದ ರವಿವಾರ ಹಮ್ಮಿಕೊಳ್ಳಲಾಗಿದ್ದ ಐದು ಜೋಡಿ ಸಾಮೂಹಿಕ ವಿವಾಹ ಸಮಾರಂಭವನ್ನು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್, ಟಿ.ಸಿ.ವೆಲ್ಫೇರ್ ಫೌಂಡೇಶನ್ನಿಂದ ಬಡ ಹೆಣ್ಣುಮಕ್ಕಳ ಮದುವೆ ಕಾರ್ಯ ನಡೆಸುತ್ತಿರುವುದು ಮಾದರಿ ಕೆಲಸವಾಗಿದೆ. ಆಧುನಿಕ ಯುಗದಲ್ಲಿ ಮದುವೆ ಖರ್ಚುಗಳು ಹೆಚ್ಚುತ್ತಿವೆ. ದೇವರಿಗೆ ಆಡಂಬರದ ಮದುವೆಗಿಂತ ಸರಳ ವಿವಾಹ ಹೆಚ್ಚು ಸಂಪ್ರೀತವಾಗುತ್ತದೆ ಎಂದು ಹೇಳಿದರು.
ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಎಸ್ಎಂಆರ್ ಗ್ರೂಪ್ನ ಚೇರ್ಮನ್ ಅಲ್ಹಾಜ್ ಎಸ್.ಎಂ.ರಶೀದ್, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡುವುದಕ್ಕಿಂತ ಸರಳ, ಸಾಮೂಹಿಕ ವಿವಾಹ ಮಾಡುವುದರಲ್ಲಿ ಹೆಚ್ಚು ಅರ್ಥವಿದೆ. ಸಾಮೂಹಿಕ ವಿವಾಹಗಳು ಇಂದಿನ ತುರ್ತು ಅಗತ್ಯ ಎಂದು ಶುಭ ಹಾರೈಸಿದರು.
ಝೀನತ್ ಬಕ್ಷ್ ಜುಮಾ ಮಸ್ಜಿದ್ನ ಅಧ್ಯಕ್ಷ ಅಲ್ಹಾಜ್ ಯೆನೆಪೊಯ ಅಬ್ದುಲ್ಲಾ ಕುಂಞಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಝೀನತ್ ಬಕ್ಷ್ ಜುಮಾ ಮಸ್ಜಿದ್ನ ಖತೀಬ್ ಸದಕತುಲ್ಲಾಹ್ ಫೈಝಿ, ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಖಜಾಂಚಿ ಬಾಷಾ ತಂಙಳ್, ಅಸಾಸುಲ್ ಇಸ್ಲಾಂ ಮಸ್ಜಿದ್ನ ಅಧ್ಯಕ್ಷ ಅಬ್ದುಲ್ ಹಮೀದ್, ಆಝಾದ್ ನಗರದ ಫಾರೂಕ್ ಜುಮಾ ಮಸ್ಜಿದ್ನ ಅಧ್ಯಕ್ಷ ಅಬ್ದುಲ್ ಅಝೀಝ್, ಕಾಶಿಪಟ್ಣದ ದಾರನ್ನೂರು ಎಜುಕೇಶನ್ ಇದರ ಉಪಾಧ್ಯಕ್ಷ ರಝಾಕ್, ಅಡ್ವೋಕೇಟ್ ಸಾದತ್ ಅನ್ವರ್ ಪಿ.ಎಂ., ಸೆಂಟ್ರಲ್ ಮಾರ್ಕೆಟ್ನ ಅದ್ದು ಹಾಜಿ, ಕಾರ್ಪೊರೇಟರ್ ಅಬ್ದುಲ್ ಲತೀಫ್, ಮುಸ್ತಫಾ ಭಾರತ್ ಎಸ್.ಎಂ., ಸೈಯದ್ ಮುಹಮ್ಮದ್ ಸಾಲಿ ತಂಙಳ್, ಲತೀಫ್ ಎಸ್.ಕೆ., ಹಾಜಿ ಇಬ್ರಾಹೀಂ (ಐಬಿಬಿಐ), ಅಬ್ದುಲ್ಲಾ ಸಿ.ಎ., ಹಾಜಿ ಎಂ.ಎಚ್. ಅಶ್ರಫ್, ಫಾರೂಕ್ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ದುಆಗೈದರು. ಹಾಫಿಳ್ ಮುಹಮ್ಮದ್ ಸಜೀಮ್ ಕಿರಾಅತ್ ಪಠಿಸಿದರು. ಟಿ.ಸಿ. ವೆಲ್ಫೇರ್ ಫೌಂಡೇಶನ್ನ ಉಪಾಧ್ಯಕ್ಷ ಯಹ್ಯಾ ತಂಙಳ್ ಸ್ವಾಗತಿಸಿದರು. ಟಿ.ಸಿ. ವೆಲ್ಫೇರ್ ಫೌಂಡೇಶನ್ನ ಅಧ್ಯಕ್ಷ ಬಿ.ಅಬ್ದುಲ್ ಸಲಾಂ ವಾರ್ಷಿಕ ವರದಿ ಮಂಡಿಸಿದರು. ಅಬ್ದುಲ್ ಖಾದರ್ ನಾವೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.