ನರೇಂದ್ರ ಮೋದಿ ಸರಿಯಿಲ್ಲ ಎಂದು ನಮಗೆ ಮೊದಲು ಹೇಳಿದವರೇ ಜನಾರ್ದನ ಪೂಜಾರಿ: ಯು.ಟಿ.ಖಾದರ್
ಮಂಗಳೂರು, ಮಾ. 17: ನರೇಂದ್ರ ಮೋದಿ ಸರಿಯಿಲ್ಲ ಎಂದು ನಮಗೆ ಮೊದಲು ಹೇಳಿಕೊಟ್ಟವರೇ ಜನಾರ್ದನ ಪೂಜಾರಿಯವರು. ಈಗ ಅವರು ‘ಭ್ರಷ್ಟಾಚಾರ ನಿರ್ಮೂಲನಗೊಳಿಸಲು ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು’ ಹೇಳಿಕೆ ನೀಡಿದ್ದಾರೆ ಎನ್ನುವುದನ್ನು ನಾನು ನಂಬಲು ಸಾಧ್ಯವಿಲ್ಲ. ಪೂಜಾರಿ ನಮ್ಮ ರಾಜಕೀಯ ಗುರು ಅವರು ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಬಯಸುತ್ತಾರೆಯೇ ಹೊರತು ಮೋದಿ ಪ್ರಧಾನಿಯಾಗಬೇಕೆಂದು ಬಯಸಲಾರರು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಜನಾರ್ದನ ಪುಜಾರಿ ಕಳೆದ ಬಾರಿ ಲೋಕಸಭೆಗೆ ಸ್ಪರ್ಧಿಸಿದಾಗ ಅತ್ಯಂತ ಕೆಟ್ಟ ಪದಗಳಲ್ಲಿ ಹೀಯಾಳಿಸಿದವರು, ಬೆದರಿಕೆ ಹಾಕಿದವರು ಬಿಜೆಪಿ ಹಾಗೂ ಅದರ ಬೆಂಬಲಿತ ಸಂಘಟನೆಗಳು. ಈಗ ಅದೇ ಪಕ್ಷದವರು ತಮ್ಮ ಲಾಭಕ್ಕಾಗಿ ಜನಾರ್ದನ ಪುಜಾರಿ ಮೋದಿಯನ್ನು ಬೆಂಬಲಿಸುವ ಮಾತು ಹೇಳಿದ್ದಾರೆ ಎಂದು ಪ್ರಚಾರದಲ್ಲಿ ತೊಡಗಿದ್ದಾರೆ. ಜನಾರ್ದನ ಪೂಜಾರಿ ಬಗ್ಗೆ ದೇಶದ ವಿವಿಧ ಕಡೆಗಳಲ್ಲಿ ಬಡವರಿಗೆ ಅತ್ಯಂತ ಹೆಚ್ಚು ಗೌರವವಿದೆ. ಅವರ ಭಾವಚಿತ್ರ ಇಟ್ಟು ಪೂಜಿಸುವ ಬಡವರಿದ್ದಾರೆ. ಅವರಿಗೆ ಮೋದಿ ಬಗ್ಗೆ ಗೌರವವಿದ್ದರೆ ಈ ಬಾರಿ ದಕ್ಷಿಣ ಕನ್ನಡ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಜನಾರ್ದನ ಪುಜಾರಿಯನ್ನು ಲೋಕಸಭೆಗೆ ಅವಿರೋಧವಾಗಿ ಕಳುಹಿಸುತ್ತೇವೆ ಎಂದು ಬಹಿರಂಗವಾಗಿ ಬೆಂಬಲ ಘೋಷಿಸಲಿ ಎಂದು ಯು.ಟಿ.ಖಾದರ್ ಸವಾಲೆಸೆದರು.
ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಗೌಡ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣದಲ್ಲಿರುತ್ತಾರೆ. ಅವರನ್ನು ಕಾಂಗ್ರೆಸ್ ಬೆಂಬಲಿಸುತ್ತದೆಯೇ ಹೊರತು ಬೇರೆ ಯಾರನ್ನು ಬೆಂಬಲಿಸುವುದಿಲ್ಲ. ಅಲ್ಲಿ ನಿಖಿಲ್ ಗೌಡ ಜಯಗಳಿಸಿದರೆ ಅದು ಕಾಂಗ್ರೆಸ್ನ ಜಯ ಎಂದು ನಾವು ಭಾವಿಸುತ್ತೇವೆ. ಇದು ಎರಡು ಪಕ್ಷಗಳು ಜಂಟಿಯಾಗಿ ಕೈಗೊಂಡ ತೀರ್ಮಾನ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ -ಜೆಡಿಎಸ್ ಒಮ್ಮತದ ಅಭ್ಯರ್ಥಿಯ ಆಯ್ಕೆ ನಡೆಯಲಿದೆ. ಪಕ್ಷದ ತೀರ್ಮಾನಕ್ಕೆ ನಮ್ಮ ಬೆಂಬಲ, ಅದರಲ್ಲಿ ಯಾವೂದೇ ಗೊಂದಲ ಇಲ್ಲ. ಅಭ್ಯರ್ಥಿಯ ಅಂತಿಮ ಆಯ್ಕೆ ಶೀಘ್ರದಲ್ಲಿ ನಡೆಯಲಿದೆ. ಎಸ್ಡಿಪಿಐಗೂ ಅಭ್ಯರ್ಥಿಗಳನ್ನು ನಿಲ್ಲಿಸುವ ಅವಕಾಶವಿದೆ. ಅವರ ಬಳಿ ನಾವು ಹೊಂದಾಣಿಕೆಯ ಮಾತುಕತೆ ನಡೆಸಿಲ್ಲ ಎಂದು ಯು.ಟಿ.ಖಾದರ್ ಹೇಳಿದರು.
ಯು.ಟಿ.ಖಾದರ್ ಸಹೋದರ ಇಫ್ತಿಕಾರ್ ಕಾಸರಗೋಡು ಲೊಕ ಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ನಮ್ಮ ಗಮನಕ್ಕೆ ಬಂದಿಲ್ಲಾ. ಈ ತೀರ್ಮಾನ ಅಲ್ಲಿನ ಸ್ಥಳೀಯರ ಮೂಲಕ ಸಲ್ಲಿಕೆಯಾಗಬೇಕು, ನೇರವಾಗಿ ಸ್ಪರ್ಧಿಸಲು ಆಗುವುದಿಲ್ಲ ಎಂದರು.
ಚುನಾವಣೆಯಲ್ಲಿ ಭಾವನಾತ್ಮಕ ವಿಚಾರಗಳನ್ನು ಬದಿಗಿಟ್ಟು ದೇಶದ ವಾಸ್ತವ ಅಭಿವೃದ್ಧಿಯ ವಿಚಾರ ಈ ಬಾರಿಯ ಚುನಾವಣಾ ವಿಚಾರವಾಗಬೇಕು. ದೇಶದಲ್ಲಿ ಗಂಭೀರವಾಗಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಂದ್ರ ಸರಕಾರ ಯಾವ ರೀತಿ ಸ್ಪಂದಿಸಿದೆ ಎಂಬ ಬಗ್ಗೆ ಚರ್ಚೆಯಾಗಬೇಕಾಗಿತ್ತು. ಅದರ ಬದಲು ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಬಿಜೆಪಿ ತಂತ್ರಗಾರಿಕೆ ನಡೆಸುತ್ತಿದೆ. ನೋಟ್ ರದ್ಧತಿಯ ಸಂದರ್ಭದಲ್ಲಿ ಸಮಸ್ಯೆಗಳಿಗೆ ಸಿಲುಕಿ ಸಾವಿಗೀಡಾದ ಕುಟುಂಬಗಳಿಗೆ ಶಾಶ್ವತ ಪರಿಹಾರ ನೀಡುವ ಕ್ರಮಗಳೂ ನಡೆದಿಲ್ಲ ಎಂದು ಸಚಿವ ಯು.ಟಿ.ಖಾದರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದೀಯ ಕಾರ್ಯದರ್ಶಿ ಐವನ್ ಡಿ ಸೋಜಾ, ಕಾಂಗ್ರೆಸ್ ಮುಖಂಡರಾದ ಈಶ್ವರ ಉಳ್ಳಾಲ್, ಕಣಚೂರು ಮೋನು, ಸದಾಶಿವ ಉಳ್ಳಾಲ, ಸಂತೋಷ್ ಕುಮಾರ್, ಸಂತೋಷ್ ಶೆಟ್ಟಿ, ಪಿಯೂಸ್ ಮೊದಲಾದವರು ಉಪಸ್ಥಿತರಿದದರು.