ರಾಜಕೀಯದ ಮೋದೀಕರಣ, ಆರ್ಥಿಕತೆಯ ಅಂಬಾನೀಕರಣವೇ ದೇಶದ ಫ್ಯಾಶಿಸಂ: ಶಿವಸುಂದರ್
ಸಹಬಾಳ್ವೆ ಉಡುಪಿಯಿಂದ ಸರ್ವಜನೋತ್ಸವ ಸಮಾವೇಶ
ಉಡುಪಿ, ಮಾ.17: ರಾಜಕೀಯದ ಮೋದೀಕರಣ, ಆರ್ಥಿಕತೆಯ ಅಂಬಾನೀಕರಣ, ಮಾಧ್ಯಮದ ಅರ್ನಾಬ್ ಗೋಸ್ವಾಮೀಕರಣವೇ ಈ ದೇಶದ ಫ್ಯಾಶಿಸಂ. ಇವೆಲ್ಲವೂ ಒಂದಕ್ಕೊಂದು ಸಂಬಂಧ ಇದೆ ಎಂದು ಅಂಕಣಕಾರ ಶಿವಸುಂದರ್ ಹೇಳಿದ್ದಾರೆ.
ಶಾಂತಿ, ಸಹೋದರತೆ ಮತ್ತು ಐಕ್ಯತೆಗಾಗಿ ಸಹಬಾಳ್ವೆ ಉಡುಪಿಯ ವತಿಯಿಂದ ಉಡುಪಿ ಕಲ್ಸಂಕ ಬಳಿಯ ರಾಯಲ್ ಗಾರ್ಡನ್ನಲ್ಲಿ ರವಿವಾರ ಆಯೋಜಿಸಲಾದ ‘ಸರ್ವಜನೋತ್ಸವ’ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
2014ರಲ್ಲಿ ಮಾಧ್ಯಮ ಸ್ವಾತಂತ್ರದಲ್ಲಿ 180 ದೇಶಗಳ ಪೈಕಿ ಭಾರತ 134 ಸ್ಥಾನದಲ್ಲಿತ್ತು. ಕಳೆದ ಐದು ವರ್ಷಗಳಿಂದ ಭಾರತ 138ನೆ ಸ್ಥಾನಕ್ಕೆ ಬಂದಿದೆ. ಅಂದರೆ ಪ್ಯಾಲೆಸ್ತೀನ್, ಶ್ರೀಲಂಕಾ, ಪಾಕಿಸ್ತಾನಕ್ಕಿಂತ ಅತ್ಯಂತ ಭೀತಿಯ ವಾತಾವರಣದಲ್ಲಿ ಭಾರತದ ಪತ್ರಕರ್ತರು ಬದುಕುತ್ತಿದ್ದಾರೆ. ವಿಶ್ವ ಸಂಸ್ಥೆ ನಡೆಸಿದ ಸಂತೋಷದಲ್ಲಿ ಬದುಕುವ ಇಂಡೆಕ್ಸ್ನಲ್ಲಿ 129 ದೇಶಗಳ ಪೈಕಿ ಕಳೆದ ಐದು ವರ್ಷಗಳಲ್ಲಿ ಭಾರತವು 10 ಅಂಶ ಕೆಳಗೆ ಇಳಿದಿದೆ ಎಂದರು.
ಚುನಾವಣೆ ಎಂಬುದು ಹಬ್ಬ. ಜನರು ಸರಕಾರದ ಬಗ್ಗೆ ತೆಗೆದುಕೊಳ್ಳಬೇಕಾದ ಜಮಾಬಂಧಿ. ಸರಕಾರ ಜನರ ಸೇವಕ. ಜಮಾಬಂಧಿ ಕೇಳುವುದು ಕೇವಲ ಹಬ್ಬದ ಕೆಲಸ ಅಲ್ಲ. ನಮ್ಮ ಹಕ್ಕು, ಕರ್ತವ್ಯದ ಕೆಲಸ ಆಗಿದೆ. ಕಳೆದ ಐದು ವರ್ಷಗಳಿಂದ ನಾವು ಭಯ ಭೀತಿಯಿಂದ ಬದುಕುತ್ತಿದ್ದೇವೆ. ನಾವು ಕನಸು ಕಂಡ ಭಾರತ ಇದಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಅಂದು ಇಂದಿರಾ ಗಾಂಧಿ ವಿರುದ್ಧ ತೀರ್ಪು ನೀಡಿದ ನ್ಯಾಯಾಧೀಶರು ಬದುಕಿದ್ದರು. ಆದರೆ ಇಂದು ಅಮಿತ್ ಶಾ ವಿರುದ್ಧ ತೀರ್ಪು ನೀಡಿದ ನ್ಯಾಯಾಧೀಶರು ನಿಗೂಢವಾಗಿ ಸಾವನ್ನಪ್ಪುತ್ತಾರೆ. ಈ ಮೂಲಕ ದೇಶದಲ್ಲಿ ಬಹಳ ಭೀತಿಯ ವಾತಾವರಣ ನಿರ್ಮಾಣವಾಗಿದೆಂದು ಅವರು ತಿಳಿಸಿದರು.
ಕಳೆದ ವರ್ಷ ಭಾರತದಲ್ಲಿ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಉತ್ಪಾದನೆ ಮಾಡಿದರೆ, ಅದರಲ್ಲಿ 28 ಸಾವಿರ ಕೋಟಿ ಅಂಬಾನಿ ಒಬ್ಬರಿಗೆ ತಲುಪುತ್ತದೆ. 126 ಕೋಟಿ ಜನ ಹಂಚಿಕೊಂಡಿರುವುದು ಕೇವಲ 65 ಸಾವಿರ ಕೋಟಿ ರೂ. ಮಾತ್ರ. ಇಡೀ ದೇಶದ ಎಲ್ಲ ರೈತರು 4.4 ಲಕ್ಷ ಕೋಟಿ ರೂ. ಸಾಲ ಪಡೆದು ಕೊಂಡಿದ್ದರೆ, ಕೇವಲ 102 ಉದ್ಯಮಿಗಳ ಕುಟುಂಬಗಳು ಪಡೆದಿರುವ 7.5 ಲಕ್ಷ ಕೋಟಿ ರೂ. ಹಣ ವಾಪಾಸ್ಸು ಬರುವುದಿಲ್ಲ ಎಂಬುದಾಗಿ ಆರ್ಬಿಐ ಹೇಳುತ್ತದೆ ಎಂದರು.
ರಾಜಕಾರಣಿಗಳು ಮಾಡುವ ಆದೇಶದಂತೆ ಸೈನಿಕರು ಕೇಲಸ ಮಾಡುತ್ತಾರೆ. ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬೇಕೇ ಬೇಡವೇ ಎಂಬುದನ್ನು ದೇಶದ ಗಡಿ ಕಾಯುವ ಯೋಧ ಮಾಡಲು ಸಾಧ್ಯವಿಲ್ಲ. ಅದನ್ನು ರಾಜಕಾರಣಿಗಳು ಮಾಡುತ್ತಾರೆ. ಯುದ್ಧ ಸೇನೆಗೆ ಸಂಬಂಧಿಸಿದಲ್ಲ. ರಾಜಕೀಯ ಉದ್ದೇಶಕ್ಕೆ ಸಂಬಂಧಪಟ್ಟಿದ್ದಾಗಿದೆ. ಯುದ್ಧದ ಉತ್ತರ ರಾಜಕೀಯವೇ ಹೊರತು ಯುದ್ಧ ಅಲ್ಲ ಎಂದು ಅವರು ಕಟುವಾಗಿ ಟೀಕಿಸಿದರು.
ನೋಟು ರದ್ಧತಿಯಿಂದ ಯಾವುದೇ ಕಪ್ಪು ಹಣ ದೇಶಕ್ಕೆ ವಾಪಾಸ್ಸು ಬಂದಿಲ್ಲ. ಆದರೆ ಅದರಿಂದ ಸತ್ತಿರುವವರ ಸಂಖ್ಯೆ 120. ಕನಿಷ್ಠ 8 ರಿಂದ 10 ಕೋಟಿ ಉದ್ಯೋಗ ನಾಶವಾಯಿತು. ಈವರೆಗೂ ದೇಶದ ಆರ್ಥಿಕತೆ ವಾಪಾಸ್ ಬಂದಿಲ್ಲ ಎಂದು ಅವರು ಹೇಳಿದರು.
ಸಮಾವೇಶದ ಆರಂಭದಲ್ಲಿ ಪುಲ್ವಾಮ ಭಯೋತ್ಪಾದನೆ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ನಂತರ ದಿಕ್ಸೂಚಿ ಭಾಷಣ ಮಾಡಿದ ಶಿವಸುಂದರ್, ಈ ದೇಶದ ಎಲ್ಲ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಈ ದೇಶದ ಆತ್ಮವನ್ನು ಕಾಯುವ ಸೈನಿಕರಿಗೆ ಒಂದು ನಿಮಿಷದ ಶ್ರದ್ಧಾಂಜಲಿಯನ್ನು ಎಲ್ಲರ ಪರವಾಗಿ ಅರ್ಪಿಸುತ್ತಿದ್ದೇನೆ ಎಂದು ಹೇಳಿ ಒಂದು ನಿಮಿಷ ಶ್ರದ್ಧಾಂಜಲಿ ಸಲ್ಲಿಸಿದರು. ಆಗ ಅವರೊಂದಿಗೆ ಎಲ್ಲಾ ಸಭಿಕರು, ಗಣ್ಯರು ಕೂಡ ಎದ್ದು ನಿಂತು ಶ್ರದ್ಧಾಂಜಲಿ ಅರ್ಪಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಹೊರಗಿನ ಭಯೋತ್ಪಾದನೆಗೆ ದೇಶದ 111 ಸೈನಿಕರು ಸತ್ತರೆ, ಒಳಗಿನ ತಾರತಮ್ಯಕ್ಕೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಂಡ ಸೈನಿಕರ ಸಂಖ್ಯೆ 150. ಅವರಿಗೂ ನಾವು ಶ್ರದ್ಧಾಂಜಲಿ ಅರ್ಪಿಸಬೇಕಾಗುತ್ತದೆ. ಪುಲ್ವಾಮ ಭಯೋತ್ಪಾದನೆಗೆ ಕಾರಣ ಹುಡುಕುವ ನಾವು ಈ ಆತಂರಿಕ ಭಯೋತ್ಪಾದನೆಗೂ ಕಾರಣ ಹುಡುಕಬೇಕಾಗಿದೆ ಎಂದು ಶಿವಸುಂದರ್ ತಿಳಿಸಿದರು.