ಆರೆಸ್ಸೆಸ್ ಮುಖಗಳ ವಿರುದ್ಧ ಮತ ಚಲಾವಣೆ ಇಂದಿನ ಅಗತ್ಯ: ಅಮೀನ್ ಮಟ್ಟು
ಸಹಬಾಳ್ವೆ ಉಡುಪಿಯಿಂದ ಸರ್ವಜನೋತ್ಸವ ಸಮಾವೇಶ
ಉಡುಪಿ, ಮಾ.17: ಇಂದು ಮನೆಗೆ (ದೇಶ) ಬಿದ್ದಿರುವ ಬೆಂಕಿಯನ್ನು ಆರಿಸಲು ಯಾವ ನೀರು (ಪಕ್ಷ) ಬೇಕೆಂಬುದನ್ನು ನೋಡಬೇಕಾಗಿಲ್ಲ. ನಮಗೆ ಮೊದಲು ಬೆಂಕಿಯನ್ನು ಆರಿಸಬೇಕಾಗಿದೆ. ಆದುದರಿಂದ ಈ ಬಾರಿಯ ಚುನಾವಣೆಯಲ್ಲಿ ಆರೆಸ್ಸೆಸ್ ಮುಖವಾಡಗಳನ್ನು ಮರೆತು ಬಿಟ್ಟು, ಅದರ ಹಿಂದಿನ ಮುಖಗಳನ್ನು ನೆನಪಿಟ್ಟುಕೊಂಡು ಮತ ಚಲಾಯಿಸಬೇಕಾಗಿದೆ ಎಂದು ಚಿಂತಕ, ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ಶಾಂತಿ, ಸಹೋದರತೆ ಮತ್ತು ಐಕ್ಯತೆಗಾಗಿ ಸಹಬಾಳ್ವೆ ಉಡುಪಿಯ ವತಿಯಿಂದ ಉಡುಪಿ ಕಲ್ಸಂಕ ಬಳಿಯ ರಾಯಲ್ ಗಾರ್ಡನ್ನಲ್ಲಿ ರವಿವಾರ ಆಯೋಜಿಸಲಾದ ‘ಸರ್ವಜನೋತ್ಸವ’ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಭಾರತವನ್ನು ಹಿಂದೂ ರಾಷ್ಟ್ರ ನಿರ್ಮಾಣ ಮಾಡುವ ಉದ್ದೇಶ ಹೊಂದಿರುವ ಆರೆಸ್ಸೆಸ್ ಸಂವಿಧಾನ ವಿರೋಧಿ ಸಂಘಟನೆಯಾಗಿದೆ ಎಂದ ಅವರು, ಆರೆಸ್ಸೆಸ್ ನಾಯಕರು ತಮ್ಮ ಮುಖವಾಡವನ್ನು ಕಳಚಿ ಇಟ್ಟು ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿ. ಈ ಛದ್ಮವೇಷದ ರಾಜಕೀಯವನ್ನು ಬಿಟ್ಟು ಬಿಡಲಿ ಎಂದು ಹೇಳಿದರು.
ಮೀನು ತಿಂದು ಧರ್ಮಸ್ಥಳಕ್ಕೆ ಹೋದ ಕಾರಣಕ್ಕೆ ಸಿದ್ದರಾಮಯ್ಯ ಹಿಂದೂ ವಿರೋಧಿ ಆಗುತ್ತಾರೆ. ಆದರೆ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ದೇವರಿಗೆ ಮೀನಿನ ಸರವನ್ನೇ ಹಾಕುತ್ತಾರೆ. ನಾವೆಲ್ಲ ಮೀನು, ಮಾಂಸ ತಿಂದೇ ದೇವಸ್ಥಾನಕ್ಕೆ ಹೋದವರು, ಮುಂದೆಯೂ ಹೋಗುತ್ತೇವೆ. ನೀವು ಹೇಳುವ ರಾಮ, ಕೃಷ್ಣ, ಶಿವ ಮಾತ್ರ ದೇವರಲ್ಲ. ಜುಮಾದಿ, ಪಂಜುರ್ಲಿ ಕೂಡ ನಮಗೆ ದೇವರು. ನಾವು ಭೂತಗಳ ಭಕ್ತರು. ನಮ್ಮ ದೈವ ಮಾಂಸಹಾರಿ. ನೀವು ಹೇಳುವ ಹಿಂದೂಗಳು ಕೇವಲ ರಾಮಮಂದಿರಕ್ಕೆ ಸೀಮಿತವಾಗಿದ್ದರೆ ಉಳಿದವರು ಹಿಂದೂಗಳಲ್ಲ ಎಂಬುದಾಗಿ ಘೋಷಿಸಿ ಬಿಡಿ ಎಂದರು.
ಉಡುಪಿ ಸಹಬಾಳ್ವೆಯ ನೆಲೆ. ಕನಕನಿಗೆ ಒಲಿದ ಕೃಷ್ಣನ ನಾಡು ಇದು. ಉಡುಪಿ ಲೋಕಸಭಾ ಕ್ಷೇತ್ರವನ್ನು ಐದು ಬಾರಿ ಕ್ರಿಶ್ಚಿಯನ್ನರ್ ಪ್ರತಿನಿಧಿಸಿದ್ದರು. ಸಹಬಾಳ್ವೆ ಪಾಠ ಇಲ್ಲಿದೆ. ಕೂಡಿ ಕಟ್ಟಿದ ನಾಡನ್ನು ಇಂದು ಒಡೆದು ಮುರಿದು ಹಾಕುತ್ತಿದ್ದಾರೆ ಎಂದು ದಿನೇಶ್ ಅಮೀನ್ ಮಟ್ಟು ಬೇಸರ ವ್ಯಕ್ತಪಡಿಸಿದರು.
ಪೇಜಾವರ ಸ್ವಾಮೀಜಿಯಿಂದ ಧರ್ಮದ್ರೋಹ
ಪೇಜಾವರ ಸ್ವಾಮೀಜಿಗಳು ನಿಜವಾದ ಹಿಂದೂ ಯಾರೆಂಬುದನ್ನು ತಿಳಿಸಲಿ. ರಘುಪತಿ ಭಟ್ ಉತ್ತಮ ಹಿಂದೂವೇ ಆಗಿದ್ದರೆ ಅದನ್ನು ಬಹಿರಂಗವಾಗಿ ಹೇಳಲಿ. ಇಲ್ಲವಾದರೆ ರಘುಪತಿ ಭಟ್ ವಿರುದ್ಧ ನಿಲ್ಲುವವರು ಹಿಂದೂಗಳಲ್ಲ ಎಂಬುದಕ್ಕೆ ಕಾರಣವನ್ನು ನೀಡಲಿ. ಅದು ಬಿಟ್ಟು ಹಿಂದೂಗಳ ಪರ ಎಂಬುದಾಗಿ ಹೇಳಿ ಕೇವಲ ಒಂದು ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಕೇವಲ ರಾಜಕೀಯ ದ್ರೋಹ ಮಾತ್ರವಲ್ಲ, ಧರ್ಮದ ದ್ರೋಹ ಮಾಡುವುದು ಸರಿಯಲ್ಲ ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.