ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಹೋರಾಟ ಸಮಿತಿ
ಯುಪಿಸಿಎಲ್ಗೆ ಕಾನೂನು ಬಾಹಿರ ಪರವಾನಿಗೆ
ಉಡುಪಿ, ಮಾ.18: ಯುಪಿಸಿಎಲ್ ಕಂಪೆನಿ ವಿರುದ್ಧ ಹಸಿರು ಪೀಠ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಯುಪಿಸಿಎಲ್ಗೆ ಆರಂಭದಿಂದ ಈವರೆಗೆ ಕಾನೂನು ಬಾಹಿರವಾಗಿ ಪರವಾನಿಗೆ ನೀಡಿದ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಯುಪಿಸಿಎಲ್ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.
ಯುಪಿಸಿಎಲ್ನಿಂದಾಗಿ ಹಲವು ವರ್ಷಗಳ ಹೋರಾಟ, ಸಂತ್ರಸ್ತರ ನಿತ್ಯ ನರಕಯಾತನೆ, ಕೃಷಿ ಬೆಳೆ ನಾಶ, ಮಕ್ಕಳ ಶಿಕ್ಷಣಕ್ಕೆ ಹೊಡೆತ, ನೀರಿನ ಸಮಸ್ಯೆ, ಕ್ಯಾನ್ಸರ್ನಂತಹ ಮಾರಕ ಕಾಯಿಲೆ, ಹೋರಾಟಗಾರರ ವಿರುದ್ಧ ಮೊಕದ್ದಮೆ ಗಳನ್ನು ಎದುರಿಸುವಂತಾಗಿದೆ. ಇದೆಲ್ಲವು ಅಧಿಕಾರಿಗಳು ಮಾಡಿರುವ ತಪ್ಪಿನಿಂದ ಸಂಭವಿಸಿವೆ ಎಂದು ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ಹೆಗ್ಡೆ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೊಟ್ಟಿರುವ ಪರವಾನಿಗೆಯನ್ನು ಪ್ರಶ್ನಿಸಿ ಅವರ ವಿರುದ್ಧ ಕ್ರಿಮಿನಲ್ ದಾವೆ ಹೂಡಲಾಗುವುದು. ಈ ಮೂಲಕ ಮುಂದಿನ ದಿನಗಳಲ್ಲಿ ದೇಶದ ಯಾವುದೇ ಅಧಿಕಾರಿಗಳು ಇಂತಹ ದೇಶ ದ್ರೋಹದ ಕೆಲಸ ಮಾಡಬಾರದೆಂಬ ಸಂದೇಶವನ್ನು ರವಾನಿಸಲಾಗುವುದು. ಈ ಹೋರಾಟವು ಅಡ್ಮಿನ್ ವಾಚ್ಗ್ರೂಪ್ ರಾಷ್ಟ್ರೀಯ ಕಮಿಟಿಯ ವತಿ ಯಿಂದ ನಡೆಯಲಿದೆ ಎಂದರು.
ಯುಪಿಸಿಎಲ್ನ್ನು ತೊಕೂರಿನಿಂದ ನಂದಿಕೂರಿಗೆ ವರ್ಗಾವಣೆ, ಸಂಬಂಧ ಪಟ್ಟ ಪಂಚಾಯತ್ಗಳ ಅನುಮತಿ, ಭೂಸ್ವಾಧೀನ, ರಕ್ಷಿತಾರಣ್ಯ ಕಡಿಯಲು ಅನುಮತಿ, ಎರಡು ಕೆರೆಗಳನ್ನು ಬೂದಿ ಹೊಂಡವಾಗಿ ಪರಿವರ್ತನೆ, ಸರಕಾರಿ ರಸ್ತೆಗಳು, ಎಲ್ಲೂರು ಗ್ರಾಮದಲ್ಲಿ ಘಟಕ ಸ್ಥಾಪನೆ, ಸಮುದ್ರಕ್ಕೆ ತ್ಯಾಜ್ಯ ಬೀಡಲು ಪಡೆದ ಅನುಮತಿ, ಪೈಪ್ಲೈನ್, ಹೈಟೆನ್ಶನ್ ತಂತಿಗಳ ಜೋಡಣೆಗೆ ಅನು ಮತಿ, ಧಾರಣ ಸಾಮರ್ಥ್ಯ ಸೇರಿದಂತೆ ಎಲ್ಲ ವಿವರಗಳನ್ನು ಕೇಳಿ ಆಯಾ ಇಲಾಖೆಗಳ ವಿರುದ್ಧ ದಾವೆಯನ್ನು ಹೂಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಯುಪಿಸಿಎಲ್ ವಿದ್ಯುತ್ ಘಟಕಕ್ಕೆ ಮೊದಲಿನಿಂದಲೂ ಯಾವುದೇ ರೀತಿಯ ಸರಿಯಾದ ಪರವಾನಿಗೆ ಇರಲಿಲ್ಲ. ಎಲ್ಲ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಕಂಪೆನಿ ಆರಂಭವಾಗಿದ್ದು, ಇದರ ವಿರುದ್ಧ ಹಲವು ರೀತಿಯ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಬದಲಾಗಿ ಹೋರಾಟ ಗಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತೆಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮಧುಕರ ಮುದ್ರಾಡಿ, ಹುಸೇನ್ ಕೋಡಿ ಬೆಂಗ್ರೆ, ಶಶಿಧರ್ ಶೆಟ್ಟಿ ಎರ್ಮಾಳ್, ರಂಗನಾಥ್ ಶೆಟ್ಟಿ, ಅಫ್ವಾನ್ ಹೂಡೆ ಉಪಸ್ಥಿತರಿದ್ದರು.