ಮಾ. 19: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ನಿರ್ಧಾರ
ಉಡುಪಿ, ಮಾ.18: ಇದೀಗ ಭಾರೀ ಕುತೂಹಲ ಕೆರಳಿಸಿರುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಿಜೆಪಿ ಹಾಗೂ ಜೆಡಿಎಸ್ ಗಳ ಅಭ್ಯರ್ಥಿಗಳ ಹೆಸರು ಮಾ. 19ರಂದು ಹೊಸದಿಲ್ಲಿ ಮತ್ತು ಬೆಂಗಳೂರಿನಲ್ಲಿ ಘೋಷಣೆ ಯಾಗಲಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಿನ್ನೆ ಬೆಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಕ್ಕೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಇದೀಗ ಕೊನೆಯ ಸುತ್ತಿನ ಆಯ್ಕೆಗಾಗಿ ದಿಲ್ಲಿಗೆ ಹೋಗಿದೆ. ಪಟ್ಟಿಯೊಂದಿಗೆ ರಾಜ್ಯದ ಪ್ರಮುಖ ನಾಯಕರೂ ಈಗ ಹೊಸದಿಲ್ಲಿಯಲ್ಲಿದ್ದಾರೆ.
ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ಇಂದು ನಡೆಯಬೇಕಿದ್ದ ಪಕ್ಷದ ಚುನಾವಣಾ ಸಮಿತಿಯ ಸಭೆಯನ್ನು ನಿನ್ನೆ ಪಣಜಿಯಲ್ಲಿ ನಿಧನರಾದ ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಅಂತ್ಯಸಂಸ್ಕಾರದ ಕಾರಣದಿಂದ ಮುಂದೂಡಲಾಗಿದೆ. ಹೀಗಾಗಿ ಮಂಗಳವಾರ ನಡೆಯುವ ಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರವೂ ಸೇರಿದಂತೆ ಬಹುಪಾಲು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಮಂಗಳವಾರವೇ ಪ್ರಕಟಿಸುವ ಸಾಧ್ಯತೆ ಇದೆ.
ಉಡುಪಿ-ಚಿಕ್ಕಮಗಳೂರಿನಿಂದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರ ಹೆಸರು ಅಂತಿಮಗೊಂಡಿದೆ ಎಂದು ನಿನ್ನೆ ಬೆಂಗಳೂರಿನಿಂದ ಮಾಹಿತಿ ಬಂದಿದ್ದರೂ, ಪಟ್ಟಿಯಲ್ಲಿ ಇನ್ನೂ 2-3 ಮಂದಿಯ ಹೆಸರು ಇದೆ ಎಂದು ತಿಳಿದುಬಂದಿದೆ. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಜೀವರಾಜ್ ಹಾಗೂ ಯಶ್ಪಾಲ್ ಸುವರ್ಣರ ಹೆಸರು ಈ ಪಟ್ಟಿಯಲ್ಲಿದೆ ಎಂದು ಬಿಜೆಪಿಯ ಉನ್ನತ ಮೂಲವೊಂದು ತಿಳಿಸಿದೆ.
‘ಪ್ರತಿ ಕ್ಷೇತ್ರದ ಬಗ್ಗೆ ತನ್ನದೇ ಮೂಲದಿಂದ ವರದಿಯೊಂದನ್ನು ತರಿಸಿ ಕೊಂಡಿರುವ ಅಮಿತ್ ಶಾ, ಇದರ ಆಧಾರದ ಮೇಲೆ ತನ್ನ ನಿರ್ಧಾರವನ್ನು ಕೈಗೊಳ್ಳಲಿ ದ್ದಾರೆ. ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದಾಗ ಹಾಲಿ ಸಂಸದೆ ವಿರುದ್ಧ ನಡೆಯುತ್ತಿರುವ ‘ಗೋ ಬ್ಯಾಕ್ ಶೋಭಾ’ ಅಭಿಯಾನದ ಬಗ್ಗೆ ಮಾಹಿತಿ ಪಡೆದಿರುವ ಅಮಿತ್ ಶಾ ಅವರೇ, ಕ್ಷೇತ್ರದ ಅಭ್ಯರ್ಥಿಯನ್ನು ನಿರ್ಧರಿಸಲಿದ್ದಾರೆ ಎಂದು ಈ ಮೂಲಗಳು ತಿಳಿಸಿವೆ. ಹೀಗಾಗಿ ಶೋಭಾ ಅವರ ಮರು ಸ್ಪರ್ಧೆ ನಾಳೆ ಅಮಿತ್ ಶಾ ಅವರಿಂದಲೇ ನಿರ್ಧಾರವಾಗಲಿದೆ.
ಪಟ್ಟಿಯ ಪರಿಶೀಲನೆ ವೇಳೆ ಅಮಿತ್ ಶಾ ಅವರು 4-5 ಮಂದಿ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿ, ಬೇರೆಯವರಿಗೆ ನೀಡಿದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.
ಮತ್ತೊಂದು ಕಡೆ ಜೆಡಿಎಸ್ ಪಕ್ಷ ತನ್ನ ಪಾಲಿನ ಎಂಟು ಸ್ಥಾನಗಳಿಗೆ ಅಭ್ಯರ್ಥಿ ಗಳ ಹೆಸರುಗಳನ್ನು ನಾಳೆ ಪ್ರಕಟಿಸಲಿದೆ ಎಂದು ಪಕ್ಷದ ಹಿರಿಯ ನಾಯಕ ರೊಬ್ಬರು ತಿಳಿಸಿದರು. ಅನಿರೀಕ್ಷಿತವಾಗಿ ಪಕ್ಷಕ್ಕೆ ಧಕ್ಕಿದ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ, ಸಮರ್ಥ ಅಭ್ಯರ್ಥಿಯೊಬ್ಬರ ತೀವ್ರ ಹುಡುಕಾಟದಲ್ಲಿದ್ದ ಜೆಡಿಎಸ್ಗೆ, ಕಾಂಗ್ರೆಸ್ ನಾಯಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೆಸರು ಉಡುಗೊರೆಯ ರೂಪದಲ್ಲಿ ಬಂದಿದೆ.
ಜೆಡಿಎಸ್ ಪಕ್ಷದ ಚಿಹ್ನೆಯಡಿಯಲ್ಲಿ ಪ್ರಮೋದ್ ಮಧ್ವರಾಜ್ ಅವರ ಸ್ಪರ್ಧೆಗೆ ಪಕ್ಷದ ಹಿರಿಯ ನಾಯಕರು ತಾತ್ವಿಕ ಒಪ್ಪಿಗೆ ನೀಡಿದ್ದರೂ, ಕೆಲವೊಂದು ವಿಷಯಗಳು ಇನ್ನೂ ಅಂತಿಮಗೊಳ್ಳದ ಹಿನ್ನೆಲೆಯಲ್ಲಿ ನಾಳೆ ಅಂತಿಮ ನಿರ್ಧಾರ ತೆಗೆದುಕೊಂಡು ಹೆಸರು ಪ್ರಕಟಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಟಿಕೇಟ್ನಿಂದ ಸ್ಪರ್ಧಿಸುವ ಕುರಿತಂತೆ ತಮಗೆ ಯಾವುದೇ ಮಾಹಿತಿ ಇಲ್ಲ. ಅವರು ರಾಜ್ಯ ನಾಯಕ ರಿಗೆ ಮಾಹಿತಿ ನೀಡಿದ್ದಾರೆಯೇ ಎಂಬುದು ತಮಗೆ ತಿಳಿಯದು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದರು.ಈ ಕುರಿತು ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಸಂಪರ್ಕಿಸಲು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ.