‘ಯಕ್ಷಗಾನದ ತಾತ್ವಿಕ ಚಿಂತನೆ ಸದಾ ಹಸಿರಾಗಿರಲಿ’
‘ರಜತಯಾನ ಸಂಭ್ರಮ’ ಸಮಾರಂಭ
ಮಂಗಳೂರು, ಮಾ.18: ಯಕ್ಷಗಾನ ನಾಡಿನ ಶ್ರೇಷ್ಠ ಕಲೆಯಾಗಿದ್ದು, ಅದರ ಮೂಲ ಸೌಂದರ್ಯವನ್ನು ಸದಾ ಉಳಿಸಿ, ಮೆರೆಸಬೇಕು. ಕಲೆಯ ತಾತ್ವಿಕ ಚಿಂತನೆಗಳು ಸದಾ ಹಸಿರಾಗಿರಲಿ ಎಂದು ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮಿ ನಾರಾಯಣ ಆಸ್ರಣ್ಣ ಹೇಳಿದರು.
ಕಟೀಲು ಮೇಳದ ಕಲಾವಿದ ಸುದಾಸ್ ಕಾವೂರು ಅವರ ಕಲಾ ಬದುಕಿನ 25ನೇ ವರ್ಷದ ಅಂಗವಾಗಿ ಕಾವೂರಿನಲ್ಲಿ ನಡೆದ ‘ರಜತಯಾನ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ದಿ.ಕಾವೂರು ಕೇಶವ ಅವರ ಸಂಸ್ಮರಣೆ, ಇತ್ತೀಚೆಗೆ ಕೀರ್ತಿಶೇಷರಾದ ಧರ್ಮಸ್ಥಳ ಮೇಳದ ಹಿರಿಯ ಮದ್ದಳೆಗಾರ ಅಡೂರು ಗಣೇಶ್ ರಾವ್ ಅವರಿಗೆ ಗೌರವ ನಿಧಿಯೊಂದಿಗೆ ಮರಣೋತ್ತರ ಪ್ರಶಸ್ತಿ ಹಾಗೂ ಹಿಮ್ಮೇಳ ಕಲಾವಿದ ದಯಾನಂದ್ ಕೋಡಿಕಲ್ ಅವರಿಗೆ ಸನ್ಮಾನ ನೆರವೇರಿತು.
ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ., ಹರಿಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ವಾಗ್ಮಿ ಪೊಳಲಿ ನಿತ್ಯಾನಂದ ಕಾರಂತ ಅಭಿನಂದನಾ ಭಾಷಣ ಮಾಡಿದರು. ಹಿರಿಯ ಯಕ್ಷಗಾನ ನಿರ್ದೇಶಕ ಶಿವರಾಂ ಪಣಂಬೂರು, ಕದ್ರಿ ಹವ್ಯಾಸಿ ಬಳಗ ಸಂಚಾಲಕ ಶರತ್ಕುಮಾರ್ ಕದ್ರಿ, ಕಂದಾಯ ಇಲಾಖೆ ಮಂಗಳೂರು ಉದ್ಯೋಗಿ ಸುಧಾಕರ ಸಾಲಿಯಾನ್, ಕಟೀಲು ಮೇಳದ ಭಾಗವತ ಅಂಡಾಲ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಸದಾಶಿವ ಶೆಟ್ಟಿ ಬೊಲ್ಪುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು. ನಂತರ ‘ಶ್ರೀರಾಮದರ್ಶನ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.