ಉಡುಪಿ: ನೀತಿ ಸಂಹಿತೆ ಉಲ್ಲಂಘನೆಯ 29 ದೂರು ದಾಖಲು
ಉಡುಪಿ, ಮಾ.19: ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ನಂತರ ಈವರೆಗೆ ಇ-ವಿಜಿಲ್ ಆ್ಯಪ್ ಮೂಲಕ 29 ನೀತಿ ಸಂಹಿತೆ ಉಲ್ಲಂಘನೆಯ ದೂರು ದಾಖಲಾಗಿವೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ತನ್ನ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿ ಕಚೇರಿಯಲ್ಲಿ ದಿನದ 24 ಗಂಟೆಯೂ ಕಾರ್ಯಾಚರಿಸುತ್ತಿರುವ ಚುನಾವಣಾ ಸಹಾಯವಾಣಿ 1950ಯಲ್ಲಿ 22 ದೂರುಗಳು ದಾಖಲಾಗಿವೆ ಎಂದರು.
ಸೂಕ್ತ ದಾಖಲೆಗಳಿಲ್ಲದೇ ನಗದು ಸಾಗಿಸುತಿದ್ದ ಒಂದು ಪ್ರಕರಣ ಮಾಳ ಚೆಕ್ಪೋಸ್ಟ್ನಲ್ಲಿ ದಾಖಲಾಗಿದ್ದು, ಇದರಲ್ಲಿ 1.5 ಲಕ್ಷ ರೂ.ನಗದನ್ನು ವಶಪಡಿಸಿ ಕೊಳ್ಳಲಾಗಿದೆ. ಅದೇ ರೀತಿ ಅಂದಾಜು 17.81 ಲಕ್ಷ ರೂ. ವೌಲ್ಯದ 5429 ಲೀ.ಮದ್ಯವನ್ನೂ ಒಂದು ಟ್ರಕ್ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಿಂದ 39 ಪ್ರಕರಣಗಳೂ, ಮೂರು ಪೊಲೀಸ್ ಪ್ರಕರಣಗಳು ದಾಖಲಾಗಿವೆ. ಪೊಲೀಸರು 30 ಟನ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಮೂರು ಲಾರಿ, ಒಂದು ಬೊಲೆರೊ ವಾಹನ, ಮೂರು ದ್ವಿಚಕ್ರ ವಾಹನ ಹಾಗೂ 2.5ಲೀ.ಮದ್ಯವನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.