ಕೌಶಲ್ಯಯುಕ್ತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು: ಡಾ.ಅಬ್ದುಲ್ ಶರೀಫ್
ಪಿ.ಎ.ಪಾಲಿಟೆಕ್ನಿಕ್ ಕಾಲೇಜಿನ ವಾರ್ಷಿಕೋತ್ಸವ
ಕೊಣಾಜೆ: ನಮ್ಮಲ್ಲಿ ಕೌಶಲ್ಯವನ್ನು ಬೆಳೆಸುವ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಮುನ್ನಡೆದರೆ ಭವಿಷ್ಯದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಅಬ್ದುಲ್ ಶರೀಫ್ ಅವರು ಅಭಿಪ್ರಾಯ ಪಟ್ಟರು.
ಅವರು ಮಂಗಳವಾರ ಕೊಣಾಜೆ ಸಮೀಪದ ನಡುಪದವಿನ ಪಿ.ಎ.ಪಾಲಿಟೆಕ್ನಿಕ್ ಕಾಲೇಜಿನ ವಾರ್ಷಿಕೋತ್ಸವ `ಎಕ್ಸ್ ಫರೇಂಝಾ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕೌಶಲ ಅಭಿವೃದ್ಧಿಗೆ ಸರಕಾರವೂ ಇಂದು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು. ಪಿ.ಎ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೌಶಲ ಅಭಿವೃದ್ದಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅಲ್ಲದೆ ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹೆಚ್ಚಿನ ಉದ್ಯೋಗಾವಕಾಶವನ್ನು ಪಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಫಾರ್ಮಸಿ ವಿಭಾಗದ ಪ್ರಾಂಶುಪಾಲರಾದ ಡಾ. ಸಲೀಮುಲ್ಲಾ ಖಾನ್ ಮಾತನಾಡಿ, ಯುವ ಸಮುದಾಯ ದೇಶದ ಸಂಪತ್ತು ಆಗಿದ್ದಾರೆ. ವಿದ್ಯಾರ್ಥಿ ಜೀವನದಲ್ಲೇ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಿ.ಎ.ಕಾಲೇಜು ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ.ಲತಾ ಕೃಷ್ಣನ್, ಪ್ರೊ.gಝೊಹರಾ ಅಬ್ಬಾಸ್ ಮೊದಲಾದವರು ಉಪಸ್ಥಿತರಿದ್ದರು. ಪಿ.ಎ.ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರಾದ ಪ್ರೊ.ಕೆ.ಪಿ.ಸೂಫಿ ವಾರ್ಷಿಕ ವರದಿ ವಾಚಿಸಿದರು. ಸಂಯೋಜಕ ಆಲಿ ಅಶ್ರಫ್ ಸ್ವಾಗತಿಸಿ, ಉಪ ಪ್ರಾಂಶುಪಾಲ ಪ್ರೊ.ಇಸ್ಮಾಯಿಲ್ ಖಾನ್ ವಂದಿಸಿದರು. ಅಜಿತ್ ಕುಮಾರ್ ವಾಸು ಕಾರ್ಯಕ್ರಮ ನಿರೂಪಿಸಿದರು.