ಮಾ. 20: ನಿಟ್ಟೆ ಕ್ಯಾಂಪಸ್ನಿಂದ ಯುವ ಮತದಾರರ ಜಾಗೃತಿ ಅಭಿಯಾನ
ಮಂಗಳೂರು, ಮಾ.19: ಲೋಕಸಭಾ ಚುನಾವಣಾ ಸಂದರ್ಭ ಯುವ ಮತದಾರರಲ್ಲಿ ಜಾಗೃತಿ ಮೂಡಿಸಿ ಶೇಕಡಾವಾರು ಮತದಾನ ಹೆಚ್ಚಿಸುವ ಸಲುವಾಗಿ ಪ್ರಸಾರ ಭಾರತಿಯ ಮಂಗಳೂರು ಆಕಾಶವಾಣಿ ಮತ್ತು ದೂರದರ್ಶನದ ನೇತೃತ್ವದಲ್ಲಿ ನಿಟ್ಟೆ ವಿವಿ ಹಾಗೂ ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ಸಹಯೋಗದಲ್ಲಿ ಮಾ.20ರಂದು ಬೆಳಗ್ಗೆ 9.15ಕ್ಕೆ ಮಂಗಳೂರು ದೇರಳಕಟ್ಟೆಯ ನಿಟ್ಟೆ ಕ್ಯಾಂಪಸ್ ಸಭಾಂಗಣದಿಂದ ಜನಮತ-ಅಭಿಮತ ಕಾರ್ಯಕ್ರಮದಡಿ ಆಯೋಜಿಸಿದ ‘ಯುವ ಮತದಾರರ ಜಾಗೃತಿ ಅಭಿಯಾನದ’ ವಿಶೇಷ ಕಾರ್ಯಕ್ರಮವನ್ನು ಮಂಗಳೂರು ಆಕಾಶವಾಣಿಯು ನೇರಪ್ರಸಾರ ಮಾಡಲಿದೆ.
ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಹಾಗೂ ಮುಖ್ಯ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ಉದ್ಘಾಟಿಸುವರು. ದ.ಕ.ಜಿಲ್ಲಾ ಚುನಾವಣಾ ರಾಯಭಾರಿ ಹಾಗೂ ನಿಟ್ಟೆ ವಿವಿಯ ಸಹ ಕುಲಾಧಿಪತಿ ಡಾ.ಎಂ. ಶಾಂತರಾಮ ಶೆಟ್ಟಿ, ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಮತ್ತು ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಮತ್ತು ಜಿಪಂ ಸಿಇಒ ಡಾ. ಸೆಲ್ವಮಣಿ ಆರ್, ಸಹಕುಲಪತಿ ಡಾ. ಎಂ.ಎಸ್.ಮೂಡಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಆಕಾಶವಾಣಿಯ ಪತ್ರಿಕಾ ಪ್ರಕಟನೆ ತಿಳಿಸಿದೆ.