ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ ಆಯ್ಕೆ
ಮಂಗಳೂರು, ಮಾ.19: ವಿಶ್ವ ಮಟ್ಟದ ಬಂಟರ ಸಂಘಗಳ ಸದಸ್ಯತ್ವ ಹೊಂದಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಮುಂಬೈಯ ಕುರ್ಲಾ ಪೂರ್ವದ ಬಂಟರ ಸಂಘದ ಎನೆಕ್ಸ್ ಸಂಕೀರ್ಣದ ಸಭಾಂಗಣದಲ್ಲಿ ಒಕ್ಕೂಟದ ಆಡಳಿತ ಪದಾಧಿಕಾರಿಗಳು ಮತ್ತು ವಿಶ್ವ ಬಂಟ ಬಂಧುಗಳ ಸಮ್ಮುಖದಲ್ಲಿ ಜರುಗಿ 2019-2022 ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿತು.
ಉಪಾಧ್ಯಕ್ಷರಾಗಿ ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ, ಕರ್ನಿರೆ ಫೌಂಡೇಶನ್ನ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಯಾಗಿ ಉಡುಪಿ ಬಂಟರ ಸಂಘದ ಅಧ್ಯಕ್ಷ ಇಂದ್ರಾಳಿ ಜಯಕರ್ ಶೆಟ್ಟಿ, ಗೌರವ ಕೋಶಾಧಿಕಾರಿಯಾಗಿ ಮುಂಬೈ ಬಂಟರ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ದಾಸ್ ಶೆಟ್ಟಿ ಹಾಗೂ ಜೊತೆ ಕಾರ್ಯದರ್ಶಿಯಾಗಿ ದ.ಕ. ಬಂಟರ ಯಾನೆ ನಾಡವರ ಮಾತೃ ಸಂಘದ ಕಾಸರಗೋಡಿನ ಕಾರ್ಯಕಾರಿ ಸಮಿತಿಯ ಸದಸ್ಯ ಸತೀಶ್ ಅಡಪ ಸಂಕಬೈಲ್ ಆಯ್ಕೆಗೊಂಡರು.
ನ್ಯಾಯವಾದಿ ಕೆ. ಪೃಥ್ವಿರಾಜ್ ರೈ ಚುನಾವಣಾಧಿಕಾರಿಯಾಗಿದ್ದರು. ಸಭೆಯಲ್ಲಿ ಒಕ್ಕೂಟದ ಲೆಕ್ಕ ಪರಿಶೋಧಕ ದಯಾಶರಣ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.