ಯುವ ವಿಜ್ಞಾನಿಗಳು ಸಂಶೋಧನಾ ಅವಕಾಶಗಳನ್ನು ಬಳಸಿಕೊಳ್ಳಿ: ಡಾ.ಅರ್ಜುಲ ರಾಮಚಂದ್ರ ರೆಡ್ಡಿ
ಮಂಗಳೂರು ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ವಿಚಾರಸಂಕಿರಣ
ಕೊಣಾಜೆ: ವಿಜ್ಞಾನ ಕ್ಷೇತ್ರದಲ್ಲಿ ಸಸ್ಯಗಳ ವಿಕಾಸದಲ್ಲಿ ಸಂಶೋಧನೆ ನಡೆಸಲು ಜಗತ್ತಿನಾದ್ಯಂತ ವಿಪುಲ ಅವಕಾಶಗಳಿದ್ದು ಯುವ ವಿಜ್ಞಾನಿಗಳು ಇಂತಹ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದು ಹೈದರಾಬಾದ್ ಯೋಗಿ ವೆಮನಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಅರ್ಜುಲ ರಾಮಚಂದ್ರ ರೆಡ್ಡಿ ಅವರು ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಜೀವವಿಜ್ಞಾನ ವಿಭಾಗದ ಆಶ್ರಯದಲ್ಲಿ ಬುಧವಾರ ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ `ರಿಸರ್ಚ್ ಟ್ರೆಂಡ್ ಇನ್ ಫ್ರಂಟಿಯರ್ ಏರಿಯಾಸ್ ಆಫ್ ಬಯಾಲಾಜಿಕಲ್ ಸೈಯನ್ಸಸ್' ಎಂಬ ವಿಷಯದಲ್ಲಿ ನಡೆದ ಯುಜಿಸಿ ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವನು ಸೇರಿದಂತೆ ಬೇರೆ ಜೀವಿಗಳಿಗೆ ಹೋಲಿಸಿದರೆ ಸಸ್ಯಗಳಲ್ಲಿ ಡಿಎನ್ಎ ಪ್ರಮಾಣವು ಅತೀ ಹೆಚ್ಚು ಇರುತ್ತದೆ. ವಿಕಾಸ ಪಥದಲ್ಲಿ ಸಸ್ಯಗಳ ತಳವ್ಯೂಹವು ವಿಸ್ತರಿಸುತ್ತಾ ಸಾಗುತ್ತದೆ. ಅದರಲ್ಲಿ ಹಾರುವ ಜೀನ್ಗಳ ಪಾತ್ರವು ಬಹುಮುಖ್ಯವಾದದ್ದು ಎಂದರು.
1940ರಲ್ಲಿ ಬಾರ್ಬರ ಮೆಕ್ಲಿನ್ಟಾಕ್ ಎಂಬ ವಿಜ್ಞಾನಿಯು ಹಾರುವ ಜೀನಿನ ಬಗ್ಗೆ ಸಂಶೋಧನೆ ನಡೆಸಿ ಅನ್ವಯಿಸಿದಾಗ ವೈಜ್ಞಾನಿಕ ಸಮುದಾಯವು ಅವರನ್ನು ಗೇಲಿ ಮಾಡಿತ್ತು. ಆದರೆ ಅವರ ಸಂಶೋಧನೆಯ ಸತ್ಯವು ಸಾಬೀತಾಗಿ ಅವರ ಮಹತ್ವದ ಅನ್ವೇಷಣೆಗಾಗಿ 1983ರಲ್ಲಿ ನೋಬೆಲ್ ಪಾರಿತೋಷಕವನು ನೀಡಿ ಗೌರವಿಸಲಾಗಿತ್ತು. ಸಸ್ಯಗಳ ಸಹ ವಿಕಸನ ಪ್ರಕ್ರಿಯೆಯಲ್ಲಿ ಒಂದು ಜಾತಿಯ ಹಲವು ಪ್ರಬೇಧಗಳಿರುವ ಸಸ್ಯವೈವಿಧ್ಯತೆಯನ್ನು ನಾವು ಪ್ರಕೃತಿಯಲ್ಲಿ ಕಾಣಬಹುದು. ಈ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಅವಕಾಶಗಳಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ.ಕಿಶೋರಿ ನಾಯಕ್ ಅವರು, ನಿರಂತರವಾದ ಓದುವಿಕೆಯು ನಮ್ಮಲ್ಲಿ ಜ್ಞಾನ ಕೌಶಲವನ್ನು ಹೆಚ್ಚಿಸುವ ಪರಿಣಾಮಕಾರಿ ಅಸ್ತ್ರವಾಗಿದೆ. ಇಂದು ವಿಜ್ಞಾನ ಕ್ಷೇತ್ರ ಸೇರಿದಂತೆ ಸಂಶೋಧನೆಗೆ ಹೆಚ್ಚಿನ ಪ್ರೋತ್ಸಾಹಗಳು ಸಿಗುತ್ತಿದ್ದು ವಿದ್ಯಾರ್ಥಿಗಳು, ಯುವ ಸಮುದಾಯ ಇಂತಹ ಅವಕಾಶಗಳನ್ನು ಬಳಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಚಾರಸಂಕಿರಣದ ಸಂಯೋಜಕಿ ಪ್ರೊ.ಮೋನಿಕಾ ಸದಾನಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಶೋಧನೆಯ ಮಹತ್ವದ ಬಗ್ಗೆ ಅರಿತುಕೊಳ್ಳಲು ಇಂತಹ ವಿಚಾರಸಂಕಿರಣಗಳು ಪರಿಣಾಮಕಾರಿಯಾಗಿದ್ದು ಮಾತ್ರವಲ್ಲದೆ ಸಂಶೋಧನಾ ತಜ್ಞರೊಂದಿಗೆ ಬೆರೆಯಲು ಅವಕಾಶ ವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಪ್ರೊ.ಟ.ವಿ.ರಾಮಚಂದ್ರ, ಕೊಚ್ಚಿ ಸಾಗರ ಜೈವಿಕ ತಂತ್ರಜ್ಞಾನ ಕ್ಷೇತ್ರದ ವಿಜ್ಞಾನಿ ಡಾ.ಕಾಜಲ್ ಚಕ್ರಬೋರ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಜೀವವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರಶಾಂತ್ ನಾಯ್ಕ್ ಅವರು ಸ್ವಾಗತಿಸಿದರು. ಪ್ರಾಧ್ಯಾಪಕಿ ಚಂದ್ರಕಲಾ ಶೆಣೈ ಅವರು ವಂದಿಸಿದರು.