ಬಬ್ಬುಕಟ್ಟೆ-ಸೇವಂತಿಗುಡ್ಡ ನಾಗರಿಕರಿಂದ ಮುಖ್ಯಮಂತ್ರಿಗೆ ಅಂಚೆ ಪತ್ರ ಅಭಿಯಾನ
ರಸ್ತೆ ಕಾಮಗಾರಿ ಬೇರೆಡೆಗೆ ಸ್ಥಳಾಂತರ ಆರೋಪ
ಮಂಗಳೂರು, ಮಾ.20: ಉಳ್ಳಾಲ ನಗರಸಭಾ ವ್ಯಾಪ್ತಿಯ ಬಬ್ಬುಕಟ್ಟೆ ಸೇವಂತಿ ಗುಡ್ಡ ರಸ್ತೆಗೆ ಮಂಜೂರಾದ ಕಾಮಗಾರಿಯನ್ನು ಬೇರೆ ವಾರ್ಡ್ಗೆ ಸ್ಥಳಾಂತರ ಮಾಡಿದ್ದಾರೆ ಎಂದು ಆರೋಪಿಸಿ ಕೃತ್ಯವನ್ನು ಖಂಡಿಸಿ ಸ್ಥಳೀಯ ನಾಗರಿಕರು ಮುಖ್ಯಮಂತ್ರಿಗೆ ಅಂಚೆ ಪತ್ರ ಅಭಿಯಾನ ಆರಂಭಿಸಿದ್ದಾರೆ.
ಈ ರಸ್ತೆಯು ಕಳೆದ ಎರಡು ವರ್ಷದಿಂದ ನಾದುರಸ್ತಿಯಲ್ಲಿದೆ. ಸಾರ್ವಜನಿಕರಿಗೆ ಇದರಲ್ಲಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ವಾಹನಗಳ ಓಡಾಟವೂ ಕಷ್ಟಕರವಾಗಿದೆ. ಸ್ಥಳೀಯ ಶಾಸಕರೂ ಆಗಿರುವ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಈ ಹಿಂದೆಯೇ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ಇದೀಗ ವಿನಾಕಾರಣ ಬೇರೆ ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಇದರಿಂದ ನಾಗರಿಕರು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಅಂಚೆ ಪತ್ರ ಅಭಿಯಾನದ ನೇತೃತ್ವ ವಹಿಸಿದ್ದ ಕೌನ್ಸಿಲರ್ ಮುಸ್ತಾಕ್ ಪಟ್ಲ ಆರೋಪಿಸಿದ್ದಾರೆ.
ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಯಾವುದೇ ರಾಜಕೀಯ ಬೇಡ. ಮಾನವೀಯ ದೃಷ್ಟಿಯಿಂದಲಾದರೂ ಸರಿ ಕಾಮಗಾರಿಯನ್ನು ಆರಂಭಿಸಬೇಕು ಎಂದು ಮುಸ್ತಾಕ್ ಪಟ್ಲ ಆಗ್ರಹಿಸಿದ್ದಾರೆ.