ಅಂಕೋಲಾದಲ್ಲಿ ವಾಹನ ಅಪಫಾತ: ಎಸೆಸೆಲ್ಸಿ ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿ ಮೃತ್ಯು
ಭಟ್ಕಳ, ಮಾ.21: ಕಾರೊಂದು ಅಪಘಾತಕ್ಕೀಡಾಗಿ ಎಸೆಸೆಲ್ಸಿ ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಅಂಕೋಲಾ ಸಮೀಪದ ಹೊಸೂರು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಭಟ್ಕಳ ನಿವಾಸಿ, ಹಾಫಿಳ್ ಶಮ್ಮಾಸ್ ಗೊಲ್ಟಿ ಎಂದು ಗುರುತಿಸಲಾಗಿದೆ. ಇವರು ತನ್ನ ಮಿತ್ರರೊಂದಿಗೆ ಕಾರವಾರದ ಕೇಂದ್ರದಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವೇಳೆ ಈ ಅವಘಢ ಸಂಭವಿಸಿದೆ.
ಹೊಸೂರು ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಉರುಳಿಬಿದ್ದಿದೆ ಎಂದು ತಿಳಿದುಬಂದಿದೆ. ಈ ವೇಳೆ ತಲೆಗೆ ಗಂಭೀರ ಗಾಯಗೊಂಡಿದ್ದ ಶಮ್ಮಾಸ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದವರ ಪೈಕಿ ಇನ್ನಿಬ್ಬರು ಗಾಯಗೊಂಡಿದ್ದಾರೆ. ಅಹ್ಮದ್ ಇಯಾದ್ ಮತ್ತು ಇಸ್ಮಾಯೀಲ್ ಬರ್ಮಾವರ್ ಗಾಯಗೊಂಡವರಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ಹಾಫಿಳ್ ಆಗಿದ್ದ ಶಮ್ಮಾಸ್ ಖಾಸಗಿಯಾಗಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದರು. ಅವರಿಗೆ ಕಾರವಾರ ಪರೀಕ್ಷಾ ಕೇಂದ್ರವಾಗಿದ್ದರಿಂದ ಅಲ್ಲಿಗೆ ಗೆಳಯರೊಂದಿಗೆ ಬೆಳಗ್ಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.