ಮೊಂಟೆಪದವು ಸರ್ಕಾರಿ ಪ್ರೌಢಶಾಲೆಯಲ್ಲಿ 'ಪರೀಕ್ಷಾ ಹಬ್ಬ'
ಕೊಣಾಜೆ: ಮೊಂಟೆಪದವು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಭಯವನ್ನು ದೂರಗೊಳಿಸುವ ನಿಟ್ಟಿನಲ್ಲಿ ಮುಖ್ಯೋಪಾಧ್ಯಾಯರು, ಶಾಲಾ ಎಸ್ಡಿಎಂಸಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳು ಸೇರಿಕೊಂಡು `ಪರೀಕ್ಷಾ ಹಬ್ಬ' ಎಂಬ ವಿನೂತನ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಪರೀಕ್ಷಾ ಹಬ್ಬಕ್ಕಾಗಿ ಮೊಂಟೆಪದವು ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಹಬ್ಬದಲ್ಲಿ ಭಾಗವಹಿಸುವುದ ರೊಂದಿಗೆ ಉಲ್ಲಾಸದೊಂದಿಗೆ ಪರೀಕ್ಷೆಯನ್ನು ಎದುರಿಸಿದರು.
ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿಗಳಿಗೆ ವಿವಿಧ ಧರ್ಮದ ಧಾರ್ಮಿಕ ಗುರುಗಳು, ಅದ್ಯಾಪಕ ವೃಂದ ಹಾಗೂ ಹಳೆ ವಿದ್ಯಾರ್ಥಿಗಳು ಗುಲಾಬಿ ಹೂವನ್ನು ನೀಡುವುದರೊಂದಿಗೆ ಶಾಲೆಗೆ ಪ್ರೀತಿಯಿಂದ ಬರಮಾಡಿಕೊಂಡರು. ಈ ಸಂದರ್ಭದಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳ ಚೆಂಡೆ ವಾದನವು ಹಿರಿಯ ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಪರಿಸರದ ಶಾಲೆಗಳ ಸುಮಾರು 300 ವಿದಾರ್ಥಿಗಳು ಮೊಂಟೆಪದವು ಸರ್ಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯುವುದರೊಂದಿಗೆ ಹಬ್ಬದಲ್ಲಿ ಭಾಗವಹಿಸಿದರು.
ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಬಳಿಕ ಅವರಿಗೆ ಚಹಾ ತಿಂಡಿಯ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದ್ದು, ವಿದ್ಯಾರ್ಥಿಗಳು ಬಳಿಕ ಪರೀಕ್ಷಾ ಕೊಠಡಿಯತ್ತ ತೆರಳಿದರು. ಹಳೆ ವಿದ್ಯಾರ್ಥಿ ಜಲೀಲ್ ಮೋಂಟುಗೋಳಿ ಉಚಿತ ತಿಂಡಿಯ ವ್ಯವಸ್ಥೆಯನ್ನು ಮಾಡಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹನೀಫ್ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪೆನ್ ವಿತರಿಸಿದರು.
ಶಾಲೆಯ ಒಂಭತ್ತನೆಯ ತರಗತಿಯ ವಿದ್ಯಾರ್ಥಿಗಳ ತಂಡ ಬೇರೆ ಬೇರೆ ಶಾಲೆಗಳಿಂದ ಬಂದ ವಿದ್ಯಾರ್ಥಿಗಳಿಗೆ ಕೊಠಡಿ ಹಾಗೂ ನಂಬರ್ ಹುಡುಕಿಕೊಟ್ಟು ಸಹಾಯ ಮಾಡಿದರು.
ಪರೀಕ್ಷಾ ಹಬ್ಬದಲ್ಲಿ ನರಿಂಗಾನದ ಸಂತ ಲಾರೆನ್ಸ್ ದೇವಾಲಯ ಬೋಳ ಇದರ ಧರ್ಮಗುರುಗಳು ಫಾ.ಮೈಕಲ್ ಡಿಸೋಜ, ನರಿಂಗಾನ ಶ್ರೀ ದುರ್ಗಾ ಪರಮೇಶ್ವರಿ ಮಠದ ಗುರುಗಳಾದ ಶಂಕರಭಟ್ ಹಾಗೂ ಮೊಂಟೆಪದವು ಬದ್ರಿಯಾ ಜುಮಾ ಮಸೀದಿಯ ಖತೀಬ್ ಸಿದ್ದೀಕ್ ಸಅದಿ ಅವರು ಭಾಗವಹಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವುದರೊಂದಿಗೆ ಆಶೀರ್ವಚನ ನೀಡಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸಂತೋಷ್ ಟಿ.ಎಮ್, ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಮುರಳೀಧರ ಶೆಟ್ಟಿ ಮೋರ್ಲ, ನರಿಂಗಾನ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರಹಿಮಾನ್ ಚಂದಹಿತ್ತಿಲು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹನೀಫ್ ಚಂದಹಿತ್ತಿಲು, ಪಂ. ಸದಸ್ಯ ಉಮ್ಮರ್ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಕೂಡಾ ಉಪಸ್ಥಿತರಿದ್ದರು.
''ಭಯವನ್ನು ಹೋಗಲಾಡಿಸಲು ನಾವು ಪರೀಕ್ಷಾ ಹಬ್ಬ ಎಂಬ ಹೊಸ ಪ್ರಯತ್ನ ವನ್ನು ಮಾಡಿದೆವು. ವಿದ್ಯಾರ್ಥಿಗಳು ಕೂಡಾ ಖುಷಿಯಿಂದಲೇ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಮಾಡಿದ್ದಾರೆ. ಇದಕ್ಕೆ ಸಹಕರಿಸಿದ ಅದ್ಯಾಪಕ ವೃಂದ, ಹಳೆ ವಿದ್ಯಾರ್ಥಿಸಂಘ ಹಾಗೂ ಶಾಲಾಭಿವೃದ್ಧಿ ಸಮಿತಿಗೆ ಅಭಿನಂದನೆಗಳು''.
- ಸಂತೋಷ್ ಟಿ.ಎಂ, ಮುಖ್ಯೋಪಾಧ್ಯಾಯರು. ಸರ್ಕಾರಿ ಪ್ರೌಢಶಾಲೆ ಮೊಂಟೆಪದವು
''ಎಸ್ಎಸ್ಎಲ್ಸಿ ಜೀವನದ ಮಹತ್ತರವಾದ ಘಟ್ಟ. ಪರೀಕ್ಷಾ ಹಬ್ಬ ಒಂದು ವಿನೂತನ ಪ್ರಯತ್ನವಾಗಿದ್ದು, ವಿದ್ಯಾರ್ಥಿಗಳೂ ಉತ್ಸಾಹದಿಂದ ಭಾಗವಹಿಸಿದ್ದಾರೆ''.
-ಅಬ್ದುಲ್ ಜಲೀಲ್ ಮೋಂಟುಗೋಳಿ, ಹಳೆವಿದ್ಯಾರ್ಥಿ
''ಪರೀಕ್ಷಾ ಹಬ್ಬದಲ್ಲಿ ನಮ್ಮನ್ನು ಪರೀಕ್ಷಾ ಕೊಠಡಿಗೆ ಹೂವು ಕೊಟ್ಟು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಪರೀಕ್ಷಾ ಭಯ ದೂರವಾಗಿದೆ ಮಾತ್ರವಲ್ಲದೆ ಇಲ್ಲಿ ಹಬ್ಬದ ವಾತಾವರಣ ಇದೆ''.
-ಪಲ್ಲವಿ, ಕೈರಂಗಳ ಶಾರದಾ ಗಣಪತಿ ವಿದ್ಯಾಕೇಂದ್ರದ ವಿದ್ಯಾರ್ಥಿನಿ
''ಇಲ್ಲಿಗೆ ಬರುವ ಮೊದಲು ಸ್ವಲ್ಪ ಪರೀಕ್ಷೆಯ ಭಯವಿತ್ತು. ಆದರೆ ಇಲ್ಲಿ ಹಬ್ಬದ ವಾತವಾರಣ ಇರುವುದರಿಂದ ನಾವು ದೈರ್ಯ ಹಾಗೂ ಸಂತಸದಿಂದಲೇ ಪರೀಕ್ಷೆಯನ್ನೂ ಬರೆಯುತ್ತೇವೆ''.
-ಹಫೀಝಾ, ಮಂಜನಾಡಿ ಅಲ್ ಮದೀನ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿನಿ