ಲೋಕಸಭಾ ಚುನಾವಣೆ: ಮತದಾನದ ಪ್ರತಿಜ್ಞಾ ವಿಧಿ
ಪುತ್ತೂರು ನಗರಸಭೆಯಿಂದ ಸಾರ್ವಜನಿಕ ಜಾಗೃತಿ ಆಂದೋಲನ
ಪುತ್ತೂರು: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುತ್ತೂರು ನಗರಸಭೆಯ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಪುತ್ತೂರು ನಗರಸಭೆ ಆಡಳಿತ ವರ್ಗದಿಂದ ಈ ಬಾರಿ ಹೊಸ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಸರ್ಕಾರಿ ಕಚೇರಿ, ರಿಕ್ಷಾ ಪಾರ್ಕಿಂಗ್, ಕಾಲೇಜುಗಳು, ಸಂಘ ಸಂಸ್ಥೆಗಳ ಕಚೇರಿಗಳಲ್ಲಿ ಈ ಮತದಾನದ ಜಾಗೃತಿ ನಡೆಸಲಾಗುತ್ತಿದೆ. ಇದಕ್ಕಾಗಿ ಅಧಿಕಾರಿಗಳ ತಂಡವೊಂದನ್ನು ನೇಮಕ ಮಾಡಲಾಗಿದೆ.
ಈ ಜಾಗೃತಿ ಕಾರ್ಯಕ್ರಮದಲ್ಲಿ ಮತದಾನದ ಪ್ರತಿಜ್ಞಾವಿಧಿ ಭೋದಿಸಿ ಎಲ್ಲರೂ ಮತದಾನ ಮಾಡುವಂತೆ ಜಾಗೃತಿ ಮಾಡಲಾಗುತ್ತಿದೆ. `ನಿಮ್ಮ ಮತ ಚಲಾಯಿಸಿ ಪ್ರಜಾಪ್ರಭುತ್ವ ಗೆಲ್ಲಿಸಿ' ಎಂಬ ಘೋಷವಾಕ್ಯದೊಂದಿಗೆ ಈ ಜಾಗೃತಿ ಕಾರ್ಯಕ್ರಮವನ್ನು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಅವರ ನೇತೃತ್ವದಲ್ಲಿ ನಗರಸಭೆಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಶ್ವೇತಾ, ಕಂದಾಯ ಇಲಾಖೆಯ ರಾಮಣ್ಣ ಗೌಡ, ರಾಧಾಕೃಷ್ಣ, ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ರಾಜೇಶ್ ನಾಯ್ಕ್ , ಪುರುಷೋತ್ತಮ ನಡೆಸುತ್ತಿದ್ದಾರೆ.
ಪುತ್ತೂರು ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ರಿಕ್ಷಾ ನಿಲ್ದಾಣದಲ್ಲಿ ಶುಕ್ರವಾರ ರಿಕ್ಷಾ ಚಾಲಕರಿಗೆ ಪ್ರತಿಜ್ಞಾವಿಧಿ ಭೋದಿಸಿ ಮತದಾನದ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.