ಕಾಂಗ್ರೆಸ್ ಮಕ್ಕಳ ಕೈಯಲ್ಲಿ ಡೈರಿ ಬರೆಸಿ ಬಿಡುಗಡೆ ಮಾಡಿದೆ: ಶೋಭಾ ಕರಂದ್ಲಾಜೆ
ಉಡುಪಿ, ಮಾ.22: ದೆಹಲಿ ಕಾಂಗ್ರೆಸ್ ನಕಲಿ ಡೈರಿ ಬಿಡುಗಡೆ ಮಾಡಿದೆ. ಈ ಮೂಲಕ ಕಾಂಗ್ರೆಸ್ ಕೀಳುಮಟ್ಟಕ್ಕೆ ಇಳಿದಿದೆ. ಕಾಂಗ್ರೆಸ್ ಮಕ್ಕಳ ಕೈಯಲ್ಲಿ ಡೈರಿ ಬರೆಸಿ ಬಿಡುಗಡೆ ಮಾಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಟುವಾಗಿ ಟೀಕಿಸಿದ್ದಾರೆ.
ದೆಹಲಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಡೈರಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಇಂದು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನ ಸುಳ್ಳು ಆರೋಪಕ್ಕೆ ಜನ ಉತ್ತರ ಕೊಡುತ್ತಾರೆ. ಚುನಾವಣೆ ಬಂದಾಗ ಗಿಮಿಕ್ ಮಾಡುವುದು ಸರಿಯಲ್ಲ. ಕಾಂಗ್ರೆಸ್ ವೈಯಕ್ತಿಕ ಚಾರಿತ್ರ್ಯವಧೆ ಮಾಡುತ್ತಿದೆ. ರಾಜಕಾರಣದಲ್ಲಿ ಹೆಣ್ಣು ಮಕ್ಕಳಿಗೆ ಏನು ಬೇಕಾದರೂ ಮಾತನಾಡಬಹುದು ಎಂಬುದಾಗಿ ತಿಳಿದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲೂ ಸಾಕಷ್ಟು ಹೆಣ್ಣು ಮಕ್ಕಳಿದ್ದಾರೆ. ಎಷ್ಟು ಜನ ಮಹಿಳೆಯರಿಗೆ ಇವರು ಗೌರವ ಕೊಡುತ್ತಾರೆ. ನಾನು ಬಿಜೆಪಿಯಲ್ಲಿರುವ ಹೋರಾಟಗಾರ್ತಿ. ನನ್ನ ಧ್ವನಿ ಅಡಗಿಸಲು ಕಾಂಗ್ರೆಸ್ ಈ ಮಟ್ಟಕ್ಕೆ ಇಳಿದಿದೆ. ನಾನು ಹೆದರಿ ಓಡಿಹೋಗುವ ಹೆಣ್ಣು ಅಲ್ಲ. ಈ ರೀತಿಯ ಆರೋಪಗಳನ್ನು ಹಲವಾರು ಎದುರಿಸಿದ್ದೇನೆ. ನನ್ನನ್ನು ಓಡಿಸೋದಕ್ಕೆ ಅವರಿಂದ ಆಗಲ್ಲ ಎಂದರು.
ಯಡಿಯೂರಪ್ಪ ಅವರಿಂದ ಕೇಂದ್ರ ನಾಯಕರಿಗೆ 1800 ಕೋಟಿ ರೂ. ಸಂದಾಯ ಆಗಿದ್ದರೆ, ಇವರದ್ದೆ ಇರುವ ಸರಕಾರ ತನಿಖೆ ಮಾಡಿ ಸಾಕ್ಷಿ ಕೊಡಲಿ ಎಂದು ಅವರು ಸವಾಲು ಹಾಕಿದರು.