ಜನರನ್ನು ಸಂಕಷ್ಟಕ್ಕೀಡಾಗಿಸಿದ ಮೆಲ್ಕಾರ್ ರಸ್ತೆ ಅಗೆತ ಕಾಮಗಾರಿ!
ಬಂಟ್ವಾಳ, ಮಾ. 23: ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್-ರಂಗೇಲು ಎಂಬಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಕೈಗೆತ್ತಿಕೊಳ್ಳಲಾದ ಅವೈಜ್ಞಾನಿಕ ರಸ್ತೆ ಅಗೆತ ಕಾಮಗಾರಿ ಇಲ್ಲಿನ ಜನ ಜೀವನವನ್ನು ಸಂಕಷ್ಟಕ್ಕೀಡು ಮಾಡಿದ್ದು, ಸಾರ್ವತ್ರಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮೆಲ್ಕಾರ್-ರಂಗೇಲು ಬಡಾವಣೆಯ ರಸ್ತೆಯ ಮಧ್ಯೆಭಾಗದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಅಗೆತ ಮಾಡಲಾಗಿದ್ದು, ಇದರಿಂದಾಗಿ ವಾಹನ ಸಂಚಾರಕ್ಕೆ ಭಾರೀ ಅಡ್ಡಿ ಉಂಟಾಗಿದೆ. ಜನರು ರಸ್ತೆಯಲ್ಲಿ ಓಡಾಡಲು ಪರದಾಟ ನಡೆಸುತ್ತಿದ್ದಾರೆ. ಆಸುಪಾಸಿನಲ್ಲಿ ರಸ್ತೆಯ ರಾಡಿ-ಧೂಳು ತುಂಬಿಕೊಂಡಿದ್ದು, ಸಮೀಪದ ಅಂಗಡಿ-ಮುಗ್ಗಟ್ಟು, ಮನೆಗಳಿಗೆ ನಿತ್ಯವೂ ಉಭಯ ಸಂಕಟ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹೆಚ್ಚಿನ ರಸ್ತೆ ಅಗೆತ ಕಾಮಗಾರಿಗಳನ್ನು ರಸ್ತೆಯ ಯಾವುದಾದರೊಂದು ಬದಿಯಿಂದಲೇ ಮಾಡಲಾಗುತ್ತಿದೆ. ಮೆಲ್ಕಾರ್-ರಂಗೇಲು ರಸ್ತೆಯಲ್ಲಿ ಮಾತ್ರ ರಸ್ತೆಯ ನಡುಭಾಗದಲ್ಲೇ ಅಗೆತ ಮಾಡಲಾಗುತ್ತಿದೆ. ರಸ್ತೆಯ ನಡುಭಾಗದಲ್ಲಿ ಅಗೆಯುವುದರಿಂದ ವಾಹನ ಸಂಚಾರಕ್ಕೆ ಅಡೆಚಣೆಯುಂಟಾಗುವುದಲ್ಲದೇ, ವಾಹನಗಳು ರಸ್ತೆಯ ಬದಿಯನ್ನು ಬಳಸಿಕೊಂಡು ಅಡ್ಡಾದಿಡ್ಡಿಯಾಗಿ ಓಡಾಡುತ್ತಿದೆ. ಇದರಿಂದಾಗಿ ರಸ್ತೆಯ ಬದಿಗಳನ್ನು ನಡೆದಾಡುವ ಪಾದಾಚಾರಿಗಳಿಗೆ ಓಡಾಡಲಾಗದೇ ಪ್ರಾಣಭೀತಿ ಎದುರಿಸಬೇಕಾಗಿದೆ. ಇಲ್ಲಿನ ಕೆಲವೊಂದು ಮನೆಗಳ ಆವರಣ ಗೋಡೆಗಳನ್ನು ಉಳಿಸಿಕೊಳ್ಳುವ ಏಕೈಕ ಉದ್ದೇಶದಿಂದಲೇ, ಅಗೆತ ಕಾಮಗಾರಿಯನ್ನು ನಡುರಸ್ತೆಯಲ್ಲೇ ಮಾಡಲಾಗಿದೆ ಎಂಬುದು ಮೆಲ್ಕಾರ್ ನಿವಾಸಿಗಳು ಮತ್ತು ಅಂಗಡಿ ಮಾಲಕರ ಆರೋಪಿಸಿದ್ದಾರೆ.
ಪುರಸಭಾಧಿಕಾರಿಗಳು ಚುನಾವಣಾ ಕರ್ತವ್ಯದ ಒತ್ತಡದಲ್ಲಿರುವುದರಿಂದ ಇಲ್ಲಿಗೆ ಅವರು ಭೇಟಿ ಕೊಡುತ್ತಿಲ್ಲ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಪ್ರತಿನಿಧಿಗಳು ಇತ್ತ ತಲೆ ಹಾಕುವಂತಿಲ್ಲ. ಇಂತಹ ಸಂದರ್ಭದಲ್ಲಿ ಚುನಾವಣಾಧಿಕಾರಿಗಳೇ ಇಲ್ಲಿನ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಬೇಕೆಂಬುದು ನಾಗರಿಕರು ಆಗ್ರಹಿಸಿದ್ದು,ಶ ಅವೈಜ್ಞಾನಿಕ ರೀತಿಯಲ್ಲಿರುವ ರಸ್ತೆ ಅಗೆತ ಕಾಮಗಾರಿಯನ್ನು ತಕ್ಷಣ ಸರಿಪಡಿಸಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.