ಉಡುಪಿ: ಛತ್ರಪತಿ ಶಿವಾಜಿ ಜಯಂತಿ ಆಚರಣೆ
ಉಡುಪಿ, ಮಾ.23: ಶಿವಾಜಿ ಮಹಾರಾಜರು ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಮೀಸಲಾಗಿರದೆ ಸರ್ವಧರ್ಮಗಳಿಗೂ ಮಾರ್ಗದರ್ಶನ ನೀಡಿದ ಮಹಾನ್ ನಾಯಕರೆನಿಸಿದ್ದಾರೆ ಎಂದು ಛತ್ರಪತಿ ಶಿವಾಜಿ ಸಹಕಾರ ಸಂಘದ ಅಧ್ಯಕ್ಷ ದಿನೇಶ ಸಿ ನಾಯ್ಕ ಅಲೆವೂರು ತಿಳಿಸಿದ್ದಾರೆ.
ನಗರದ ಪೂಂಜಾ ಟವರ್ಸ್ ಕಟ್ಟಡದಲ್ಲಿ ಛತ್ರಪತಿ ಶಿವಾಜಿ ಸಹಕಾರ ಸಂಘದ ವತಿಯಿಂದ ಶನಿವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಡೀ ಸಮಾಜಕ್ಕೆ ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟಿದ್ದು ಮಾತ್ರವಲ್ಲದೇ ದೇಶಕ್ಕಾಗಿ ಬದುಕಲು ಪ್ರೇರಣೆ ನೀಡಿದವರು ಶಿವಾಜಿ ಮಹಾರಾಜರು ಎಂದವರು ಹೇಳಿದರು.
ಛತ್ರಪತಿ ಶಿವಾಜಿ ಸಹಕಾರ ಸಂಘದ ನಿರ್ದೇಶಕರಾದ ಆರ್.ಸಿ.ನಾಯ್ಕಾ, ಗಣೇಶ, ಸುಭಾಷ ನಾಯ್ಕಾ, ಸತೀಶ ನಾಯ್ಕಾ, ಲಕ್ಷಣ ನಾಯ್ಕಾ, ಸುರೇಶ ಅಮೀನ್, ಕೃಷ್ಣ ನಾಯ್ಕಾ, ಕರುಣಾಕರ ಕಾಂಚನ್, ಗಿರಿಜ ನಾಯ್ಕಾ, ಸಹಕಾರಿ ಸಂಘಗಳ ಸಿಇಒಗಳಾದ ಪ್ರಕಾಶ ಸುವರ್ಣ ಕಟಪಾಡಿ, ಪ್ರದೀಪ ಕೆ, ಭುವನೇಶ ಪ್ರಭು ಹಿರೇಬೆಟ್ಟು, ರಾಘವೇಂದ್ರ ಕರ್ಕೇರ ಕೋಡಿ ಹಾಗೂ ಇತರರು ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಾಂತ್ ಎಸ್.ಪಿ. ಸ್ವಾಗತಿಸಿ ವಂದಿಸಿದರು.