ಗೃಹ ಉತ್ಪನ್ನ, ಕಾಗದ-ಬಟ್ಟೆ ಚೀಲ ತಯಾರಿ ತರಬೇತಿ
ಉಡುಪಿ, ಮಾ.23: ಉಡುಪಿ ಆಶಾ ನಿಲಯ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯ ಶಿಕ್ಷಕಿಯರಿಗೆ ಮತ್ತು ಮಕ್ಕಳ ಪಾಲಕರಿಗೆ ಎರಡು ದಿನಗಳ ಗೃಹ ಉತ್ಪನ್ನಗಳಾದ ಸಾರು, ಸಾಂಬಾರು, ಕಷಾಯ ಹುಡಿ, ಪುಳಿಯೋಗರೆ, ಜಾಮ್ ತಯಾರಿಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿಯನ್ನು ನೀಡಲಾಯಿತು.
ಈ ಉಚಿತ ತರಬೇತಿ ಶಿಬಿರದಲ್ಲಿ ಸುಮಂಗಲ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡರು. ಅಲ್ಲದೆ ನಿಲಯದ ಶಿಕ್ಷಕಿಯರಿಗೆ ಒಂದು ದಿನದ ಕಾಗದ ಮತ್ತು ಬಟ್ಟೆ ಚೀಲ ತಯಾರಿ ಬಗ್ಗೆಯೂ ತರಬೇತಿ ನೀಡಲಾಯಿತು. ನಿಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಅನೇಕ ಕರಕುಶಲ ತರಬೇತಿ ನಡೆಯುತ್ತಿದ್ದು, ಶಿಕ್ಷಕರು ಪಡೆದ ತರಬೇತಿ ಇದಕ್ಕೆ ಪೂರಕವಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಂದ ಬೇಕಾದ ಮೌಲ್ಯವರ್ಧಿತ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಾಧ್ಯ ಎಂದು ಸಂಸ್ಥೆಯ ಮುಖ್ಯಸ್ಥೆ ಜಯವಿಜಯ ಅಭಿಪ್ರಾಯಪಟ್ಟರು.
ಈ ಎರಡು ಕಾರ್ಯಕ್ರಮಗಳು ಮಣಿಪಾಲದ ಭಾರತಿಯ ವಿಕಾಸ ಟ್ರಸ್ಟ್ ಹಾಗೂ ಬೆಂಗಳೂರಿನ ಸೆಲ್ಕೋ ಪೌಂಡೇಶನ್ನ ಸಹಭಾಗಿತ್ವದಲ್ಲಿ ನಡೆದವು. ಬಿವಿಟಿಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.