ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಕುಕ್ಕಿಕಟ್ಟೆ ಶಾಖೆ ಉದ್ಘಾಟನೆ
ಉಡುಪಿ, ಮಾ. 24: ಕುಕ್ಕಿಕಟ್ಟೆ ಇಮೇಜ್ ಟವರ್ನಲ್ಲಿ ಆರಂಭಗೊಂಡಿರುವ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಹವಾನಿ ಯಂತ್ರಿತ ಕುಕ್ಕಿಕಟ್ಟೆ ಶಾಖೆಯನ್ನು ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ರವಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸ್ವಾಮೀಜಿ, ಗ್ರಾಹಕರಿಗೆ ನೀಡಿದ ಉತ್ತಮ ಸೇವೆಯಿಂದ ಬಡಗಬೆಟ್ಟು ಸೊಸೈಟಿಗೆ ಇಡೀ ಜಗತ್ತಿನಲ್ಲಿ ವಿಶೇಷ ಸ್ಥಾನಮಾನ ದೊರೆತಿದೆ. 100ವರ್ಷ ಆಚರಿಸುತ್ತಿ ರುವ ಈ ಸೊಸೈಟಿ ಬಹಳ ಶಕ್ತಿಯುತವಾಗಿ ಬೆಳೆದಿದೆ. ಯಾವುದೇ ಸಂಸ್ಥೆ ಬೆಳೆಯಲು ಒಗ್ಗಟ್ಟು ಮತ್ತು ನಂಬಿಕೆ ಅತಿಮುಖ್ಯ. ಬ್ಯಾಂಕ್ ಗಳ ನಿಜವಾದ ಬಂಡವಾಳ ನಂಬಿಕೆಯೇ ಹೊರತು ಹಣ ಅಲ್ಲ. ನಂಬಿಕೆಯೇ ಬ್ಯಾಂಕಿನ ನಿಜವಾದ ಶಕ್ತಿ ಎಂದರು.
ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಅಲೆವೂರು ಶ್ರೀಧರ ಶೆಟ್ಟಿ ಬ್ಯಾಂಕಿನ ಲಾಕರ್ ವಿಭಾಗವನ್ನು ಮತ್ತು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್ ಕಂಪ್ಯೂಟರ್ ವಿಭಾಗವನ್ನು ಉದ್ಘಾಟಿಸಿದರು.
ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಚಂದ್ರಪ್ರತಿಮಾ, ಎಸ್ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ, ಅಶೋಕ್ ಶೆಟ್ಟಿ, ಬ್ಯಾಂಕಿನ ಉಪಾಧ್ಯಕ್ಷ ಎಲ್.ಉಮನಾಥ್, ಶತಮಾನೋತ್ಸವ ಸಮಿತಿಯ ಸಂಚಾಲಕ ಪುರುಷೋತ್ತಮ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ವಸಂತ ಕೆ.ಕಾಮತ್, ವಿನಯ ಕುಮಾರ್ ಟಿ.ಎ., ಜಯಾನಂದ ಸಿ.ಮೈಂದನ್, ಪದ್ಮನಾಭ ಕೆ.ನಾಯಕ್, ರಘುರಾಮ ಶೆಟ್ಟಿ, ಜಾರ್ಜ್ ಸ್ಯಾಮುಯಲ್, ಸದಾಶಿವ ನಾಕ್, ಜಯಾ ಶೆಟ್ಟಿ ಉಪಸ್ಥಿತರಿದ್ದರು.
ಅಧ್ಯಕ್ಷ ಸಂಜೀವ ಕಾಂಚನ್ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಆಚಾರ್ಯ ವಂದಿಸಿದರು. ಸಮರ್ಥ ಶೆಟ್ಟಿ ಕಾರ್ಯಕ್ರಮ ನಿರೂ ಪಿಸಿದರು.