ಆಧ್ಯಾತ್ಮಿಕ ದಾರಿದ್ರ್ಯದಿಂದ ಸಾಮಾಜಿಕ ಸಮಸ್ಯೆ ಸೃಷ್ಠಿ: ನ್ಯಾ.ಹಿಂಚಿಗೇರಿ
ಉಡುಪಿ, ಮಾ.24: ದೇಶದಲ್ಲಿ ಆಧ್ಯಾತ್ಮಿಕ ದಾರಿದ್ರ್ಯದಿಂದ ಸಾಮಾಜಿಕ ಸಮಸ್ಯೆಗಳು ಹುಟ್ಟಿ ಕೊಂಡಿವೆ. ಆದುದರಿಂದ ಇಲ್ಲಿನ ಆಧ್ಯಾತ್ಮಿಕ ಶಕ್ತಿ ವೃದ್ಧಿಸ ಬೇಕು ಎಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಹೇಳಿದ್ದಾರೆ.
ಉಡುಪಿ ಪಲಿಮಾರು ಮಠ ಮತ್ತು ಬೆಂಗಳೂರು ಇಸ್ಕಾನ್ ಆಶ್ರಯದಲ್ಲಿ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ಆಯೋಜಿಸಲಾದ ಶ್ರೀ ಚೈತನ್ಯ ಜಯಂತಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿ ದ್ದರು.
ಆಧುನಿಕ ಯುಗದಲ್ಲಿ ಮನುಷ್ಯ ವೇಗದ ಜೀವನ ಸಾಗಿಸುತ್ತಿದ್ದು, ಆತ್ಮೋದ್ಧಾರದ ಚಿಂತೆ ಹೊಂದಿಲ್ಲ. ದೇಹಕ್ಕೆ ಅನ್ನದ ಅವಶ್ಯಕತೆ ಹೇಗಿದೆಯೋ ಹಾಗೆ ಆತ್ಮದ ಹಸಿವು ನೀಗಿಸಲು ಜಪಾನುಷ್ಠಾನದ ಅಗತ್ಯವಿದೆ. ಜಗತ್ತಿಗೆ ಭಾರತ ಬೆಳಕಿನ ಅರಮನೆ. ದಾರ್ಶನಿಕರ ಕಾರ್ಯಕ್ರಮಗಳು ಇದಕ್ಕೆ ಪೂರಕವಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಭಗವಂತನ ಸಂಪರ್ಕದಿಂದ ಜಡ ಶರೀರ ಚೈತನ್ಯ ಪಡೆಯುತ್ತದೆ. ಲಜ್ಜೆ ಬಿಟ್ಟು ದೇವರಿಗೆ ಶರಣಾಗಬೇಕು. ಸಂಕೀರ್ತನೆ, ನರ್ತನಸೇವೆ ಮಾಡಬೇಕು. ಭಗವಂತನ ಮುಂದೆ ಪರಾಜಯ, ಜಗತ್ತಿನಲ್ಲಿ ದಿಗ್ವಿಜಯಕ್ಕೆ ಕಾರಣವಾಗುತ್ತದೆ ಎಂಬುದನ್ನು ಚೈತನ್ಯ ಪ್ರಭುಗಳು ಸಾರಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಇಸ್ಕಾನ್ ಬೆಂಗಳೂರು ಅಧ್ಯಕ್ಷ ಮಧು ಪಂಡಿತ ದಾಸ್ ವಹಿಸಿದ್ದರು. ಸಿಬಿಐ ಮಾಜಿ ನಿರ್ದೇಶಕ ಡಾ.ಡಿ.ಆರ್.ಕಾರ್ತಿಕೇಯನ್, ಇಸ್ಕಾನ್ ಬೆಂಗಳೂರು ಹಿರಿಯ ಉಪಾಧ್ಯಕ್ಷ ಚಂಚಲಪತಿ ದಾಸ್, ಚೆನ್ನೈ ಇಸ್ಕಾನ್ ಅಧ್ಯಕ್ಷ ಸೊತೀಕಕೃಷ್ಣ ಸ್ವಾಮಿ, ಪಲಿಮಾರು ಮಠದ ದಿವಾನ ವೇದವ್ಯಾಸ ತಂತ್ರಿ, ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಉಪಸ್ಥಿತರಿದ್ದರು.