ದ.ಕ.ಜಿಲ್ಲಾ ಮಟ್ಟದ ಭರತಮುನಿ ಜಯಂತಿ ಕಾರ್ಯಕ್ರಮ
ಮಂಗಳೂರು, ಮಾ.24: ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭರತಮುನಿ ಜಯಂತಿ ಕಾರ್ಯಕ್ರಮ ನಗರದ ಕುದ್ಮುಲ್ ರಂಗರಾವ್ ಪುರಭವನಲ್ಲಿ ರವಿವಾರ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಇಡ್ಯಾ ರಮಾನಂದ ಭಟ್ ನಾಟ್ಯ ಸಂಗೀತ ಕಲೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ದೇವ ದೇವತೆಗಳ ಕಾಲದಿಂದ ಆರಂಭಿಸಿ, ಕಲಿಯುಗದ ವಿಜ್ಞಾನ ಯುಗದಲ್ಲೂ ತನ್ನ ಮೂಲಕ್ಕೆ ಚ್ಯುತಿ ಬರದಂತೆ ಕಲೆಗೆ ಅನುಸಾರವಾಗಿ ಮೆರೆಯುತ್ತಿವೆ. ಭರತಮುನಿಯಿಂದ ಆರಂಭವಾದ ಶಾಸ್ತ್ರೀಯ ನಾಟ್ಯ ಎಲ್ಲ ಕಲೆಗಳಿಗೆ ಮೂಲ ಎಂದರು.
ಉಜಿರೆ ಎಸ್ಡಿಎಂ ಕಾಲೇಜಿನ ನಿವೃತ್ತ ಸಂಸ್ಕೃತ ಉಪನ್ಯಾಸಕ ಡಾ. ಮಹಾಬಲ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಲಲಿತ ಕಲಾ ಕಾಲೇಜು ನೃತ್ಯ ವಿಭಾಗ ಪ್ರಾಧ್ಯಾಪಕ ಡಾ.ಕೆ.ಕುಮಾರ್ ನುಡಿನಮನ ಸಲ್ಲಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್. ಜಿ., ಸಂಸ್ಕಾರ ಭಾರತಿ ಅಧ್ಯಕ್ಷ ಪುರುಷೋತ್ತಮ ಕೆ. ಭಂಡಾರಿ, ನೃತ್ಯ ಗುರು ಉಳ್ಳಾಲ ಮೋಹನ ಕುಮಾರ್, ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಅಧ್ಯಕ್ಷ ಪಿ.ಕಮಲಾಕ್ಷ ಆಚಾರ್, ಉಪಾಧ್ಯಕ್ಷ ವಿದ್ವಾನ್ ಯು.ಕೆ. ಪ್ರವೀಣ್, ಕೋಶಾಧಿಕಾರಿ ಶ್ರೀಧರ ಹೊಳ್ಳ ಉಪಸ್ಥಿತರಿದ್ದರು. ಕಾರ್ಯದರ್ಶಿ ಚಂದ್ರಶೇಖರ ನಾವಡ ಸ್ವಾಗತಿಸಿದರು.
ಸನ್ಮಾನ-ಅಭಿನಂದನೆ: ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತ ನೃತ್ಯ ಕಲಾವಿದೆ, ಡಾ.ವಸುಂಧರಾ ದೊರೆಸ್ವಾಮಿ ಅವರನ್ನು ಸನ್ಮಾನಿಸಲಾಯಿತು. 2018ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಕೊಲ್ಯ ನಾಟ್ಯ ನಿಕೇತನ ನೃತ್ಯ ವಿದುಷಿ ರಾಜಶ್ರೀ ಉಳ್ಳಾಲ್ ಅವರನ್ನು ಅಭಿನಂದಿಸಲಾಯಿತು.
ಶಾಂತಲಾ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ಪ್ರೊ.ಉಷಾದಾತಾರ್ ಬೆಂಗಳೂರು ಅವರಿಂದ ದೇವಾಲಯ ನೃತ್ಯ ಪ್ರದರ್ಶನ ಮತ್ತು ಉಪನ್ಯಾಸ ನಡೆಯಿತು. ನೃತ್ಯ ಕಲಾ ಗುರುಗಳಿಂದ ಶ್ರೀ ಸರಸ್ವತಿ-ಶ್ರೀ ಲಕ್ಷ್ಮೀ-ಶ್ರೀ ಪಾರ್ವತಿ ತ್ರಿಶಕ್ತಿ ನೃತ್ಯ ಪ್ರದರ್ಶನ ನಡೆಯಿತು.