ರಾಮಕೃಷ್ಣ ಮಿಷನ್ನಿಂದ 16ನೇ ‘ಸ್ವಚ್ಛ ಮಂಗಳೂರು’ ಶ್ರಮದಾನ
ಮಂಗಳೂರು, ಮಾ.24: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಜರುಗುತ್ತಿರುವ ಸ್ವಚ್ಛತಾ ಅಭಿಯಾನದ 5ನೇ ಹಂತದ 16ನೇ ರವಿವಾರದ ಶ್ರಮದಾನ ವನ್ನು ಮಣ್ಣಗುಡ್ಡೆ ಹಾಗೂ ಉರ್ವ ಮಾರ್ಕೆಟ್ ಮಧ್ಯದಲ್ಲಿರುವ ಪೆಂಟ್ಲಾಂಪೇಟ ಪ್ರದೇಶದಲ್ಲಿ ಕೈಗೊಳ್ಳಲಾಯಿತು.
ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ಮಂಗಳೂರು ವಿಭಾಗದ ಅಧ್ಯಕ್ಷ ಡಾ. ಸಚ್ಚಿದಾನಂದ ರೈ ಹಾಗೂ ಡಾ.ಪ್ರಶಾಂತ ಮುಖ್ಯಅತಿಥಿಗಳಾಗಿ ಭಾಗಿಯಾಗಿ ಶ್ರಮದಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸಚ್ಚಿದಾನಂದ ರೈ, ‘ಯಾವ ಮನುಷ್ಯ ಸ್ವಚ್ಛತೆಗೆ ಆದ್ಯತೆ ನೀಡುತಾನೋ ಆತ ಅತ್ಯಂತ ಆರೋಗ್ಯ ಪೂರ್ಣವಾಗಿರುತ್ತಾನೆ. ಇಂತಹ ಜೀವನ ಪಾಠವನ್ನು ಜನರಿಗೆ ಮನದಟ್ಟು ಮಾಡಿಕೊಡುತ್ತಿರುವ ಈ ಅಭಿಯಾನದ ಕಾರ್ಯ ಶ್ಲಾಘನೀಯ. ಈ ಜಾಗೃತಿ ಕಾರ್ಯ ನಿರಂತರವಾಗಿ ನಡೆಯಬೇಕು. ಮುಂದಿನ ಪೀಳಿಗೆಗೆ ಉತ್ತಮ ಹಾಗೂ ಸುಸಂಸ್ಕೃತ ಸಮಾಜ ನಿರ್ಮಿಸಿ ಕೊಡುವ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದರು.
ಮತ್ತೋರ್ವ ಮುಖ್ಯಅತಿಥಿ ಡಾ.ಪ್ರಶಾಂತ ಮಾತನಾಡಿ, ‘ಪರಿಸರದ ಸ್ವಚ್ಛತೆ ಜತೆಗೆ ಮನಸುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಬಹಳ ಮುಖ್ಯವಾಗಿ ಆಗಬೇಕಿದೆ. ಮನುಷ್ಯ ಸ್ವಾರ್ಥರಹಿತವಾಗಿ ಯೋಚಿಸಿದಾಗ ಸಮಾಜದ ಸಮಸ್ಯೆಗಳು ತನ್ನಿಂದ ತಾನೇ ಪರಿಹಾರವಾಗುತ್ತವೆ. ಮೇಲ್ವರ್ಗದವರು ಸಮಾಜದ ಜೊತೆ ಒಂದಾಗಿ ಬದುಕಿದಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಈ ಸ್ವಚ್ಛತಾ ಅಭಿಯಾನ ಅಂತಹ ಎಲ್ಲ ವಿಚಾರಗಳಿಗೆ ವೇದಿಕೆ ನಿರ್ಮಾಣ ಮಾಡಿಕೊಡುತ್ತಿರುವುದು ಸಂತೋಷದ ಸಂಗತಿ’ ಎಂದು ತಿಳಿಸಿದರು.
ಅಭಿಯಾನದ ಮಾರ್ಗದರ್ಶಿ ಕ್ಯಾ.ಗಣೇಶ್ ಕಾರ್ಣಿಕ್, ಕಿಶೋರ್ ಕುಮಾರ್, ಸುರೇಂದ್ರ ನಾಯಕ್, ಉಮಾಪ್ರಸಾದ್ ಕಡೆಕಾರ್, ಕವಿತಾ ಶಾಸ್ತ್ರಿ, ಆ್ಯಂಡ್ರೂ ರೋಡ್ರಿಗಸ್, ಡಾ.ನಂದಿತಾ ಪೈ, ಸುಬ್ರಾಯ ನಾಯಕ್, ಮಧುಚಂದ್ರ ಆಡ್ಯಂತಾಯ, ಮೆಹಬೂಬ್ಸಾಬ್ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಅಭಿಯಾನದ ಸಂಚಾಲಕ ಏಕಗಮ್ಯಾನಂದ ಶ್ರೀ ಸ್ವಾಗತಿಸಿ, ವಂದಿಸಿದರು.
ರಾಶಿರಾಶಿ ಬಿದ್ದಿದ್ದ ಕಸ
ಏಕಗಮ್ಯಾನಂದ ಶ್ರೀ ಮಾರ್ಗದರ್ಶನದಲ್ಲಿ ಮೊದಲಿಗೆ ನಾಲ್ಕು ತಂಡಗಳನ್ನು ರಚಿಸಲಾಯಿತು. ಮೊದಲ ತಂಡ ರಾಜೇಂದ್ರ ಸುಬ್ರಮಣ್ಯ ಜೊತೆಗೂಡಿ ಕೆಪಿಟಿ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಉರ್ವ ಮಾರ್ಕೆಟ್ನತ್ತ ತೆರಳುವ ಮಾರ್ಗಬದಿಗಳನ್ನು ಹಾಗೂ ತೋಡುಗಳಲ್ಲಿದ್ದ ಮಣ್ಣು, ಕಲ್ಲು -ಕೊಳೆ ತೆಗೆದು ಸ್ವಚ್ಛಗೊಳಿಸಿದರು.
ಸುಧೀರ್ ವಾಮಂಜೂರು, ರವಿ ಕೆ.ಆರ್. ಅಲ್ಲಿಯೇ ರಾಶಿರಾಶಿಯಾಗಿ ಬಿದ್ದಿದ್ದ ಕಸವನ್ನು ಸ್ವಯಂ ಸೇವಕರೊಂದಿಗೆ ಸೇರಿ ತೆಗೆದು ಸ್ವಚ್ಛಗೊಳಿಸಿದರು. ಉದಯ ಕೆ.ಪಿ. ಹಾಗೂ ಹಿರಿಯ ಕಾರ್ಯಕರ್ತರು ತೋಡುಗಳಲ್ಲಿದ್ದ ತ್ಯಾಜ್ಯವನ್ನು ತೆಗೆದರು. ಬೆಸೆಂಟ್ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕ ಗಣೇಶ್ ಪೈ ನೇತೃತ್ವದಲ್ಲಿ ಮಠದ ಕಣಿ ರಸ್ತೆಯಲ್ಲಿದ್ದ ಹುಲ್ಲು ಸಹಿತ ಕಸವನ್ನು ತೆಗೆದು ಶ್ರಮದಾನ ಮಾಡಿದರು.
ಮೂರನೇ ತಂಡ ಪೆಂಟ್ಲಾಂಪೇಟ್ ವೃತ್ತ ಹಾಗೂ ಗಾಂಧಿನಗರ ರಸ್ತೆಗಳನ್ನು ಗುಡಿಸಿ ಹಸನು ಮಾಡಿದರು. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಸ್ವಚ್ಛತಾ ಸೇನಾ ಕಾರ್ಯಕರ್ತರು ಗಾಂಧಿನಗರದ ಅನೇಕ ಮನೆಗಳಿಗೆ ತೆರಳಿ ಸ್ವಚ್ಛತೆಯ ಮಹತ್ವದ ಕುರಿತು ಅರಿವು ಮೂಡಿಸಿ ಕರಪತ್ರ ಹಂಚಿದರು. ಉಪನ್ಯಾಸಕ ಸುಭಾಶ್ಚಂದ್ರ ರೈ, ಅಭಿಷೇಕ್ ವಿ.ಎಸ್., ಸುರೇಶ್ ಶೆಟ್ಟಿ ಮಾರ್ಗದರ್ಶನ ನೀಡಿದರು. ಅಭಿಯಾನದ ಪ್ರಮುಖರಾದ ಸುಭೋದಯ ಆಳ್ವ ಶ್ರಮದಾನದ ಉಸ್ತುವಾರಿ ವಹಿಸಿದ್ದರು.
ದಾರಿಸೂಚಕ ಫಲಕ ನವೀಕರಣ
ಮಂಗಳೂರು ನಗರದ ಹಲವೆಡೆ ಸಾರ್ವಜನಿಕರ ಅನುಕೂಲಕ್ಕಾಗಿ ಹಾಕಲಾದ ಮಾರ್ಗಸೂಚಕ ಫಲಕಗಳು ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಅಂತಹ ಬೋರ್ಡ್ಗಳನ್ನು ಗುರುತಿಸಿ ನವೀಕರಿಸಲಾಗುತ್ತಿದೆ. ರವಿವಾರವೂ ಮಣ್ಣಗುಡ್ಡೆ ಯಲ್ಲಿರುವ ಗಾಂಧಿನಗರ 7ನೇ ಅಡ್ಡರಸ್ತೆ, ಮಠದ ಕಣಿ ರಸ್ತೆ ಹಾಗೂ ಗಾಂಧಿನಗರ ರಸ್ತೆಯ ಮೂರು ನಾಮಫಲಕಗಳನ್ನು ಬಣ್ಣ ಬಳಿದು ಮರುಬರೆಯಿಸಲಾಯಿತು.
ಹಸಿಕಸ ನಿರ್ವಹಣೆಗೆ ಮಡಿಕೆ
ಮನೆ ವ್ಯಾಪ್ತಿ ಹಸಿಕಸ ನಿರ್ವಹಣೆಗಾಗಿ ರಾಮಕೃಷ್ಣ ಮಿಷನ್ ವತಿಯಿಂದ ನಗರದ ವಿವಿಧೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾ ಯಿತು. ಇದೀಗ ಹಸಿಕಸ ನಿರ್ವಹಿಸಲು ಮೂರು ಮಡಿಕೆ ವಿಧಾನದ ಮಡಿಕೆಗಳನ್ನು ಮಠದಲ್ಲಿ ವಿತರಣೆ ಮಾಡಲಾಗುತ್ತಿದೆ. ಇಂದಿನವರೆಗೆ ಒಟ್ಟು 3,000ಕ್ಕೂ ಅಧಿಕ ಜನ ಹೆಸರುಗಳನ್ನು ನೋಂದಾಯಿಸಿಕೊಂಡಿರುವುದನ್ನು ಸ್ಮರಿಸಬಹುದು. ಇಲ್ಲಿಯವರೆಗೆ 700 ಜೋಡಿ ಮಡಿಕೆಗಳನ್ನು ವಿತರಿಸಲಾಗಿದೆ. ಇನ್ನುಳಿದವರಿಗೆ ಮುಂದಿನ ಕಂತುಗಳಲ್ಲಿ ವಿತರಿಸಲಾಗುತ್ತದೆ.