ಮೂಡುಬಿದಿರೆಯಲ್ಲಿ ಮ್ಯಾರಥಾನ್ ಸ್ಪರ್ಧೆ, ಸೌಹಾರ್ದ ನಡಿಗೆ
ಮೂಡುಬಿದಿರೆ: ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದ.ಕ ಜಿಲ್ಲಾ ಮಟ್ಟದ ಮ್ಯಾರಾಥಾನ್ ಸ್ಪರ್ಧೆ, ಹಿರಿಯ ನಾಗರಿಕರಿಗೆ ಸೌಹಾರ್ದ ನಡಿಗೆ ಕಾರ್ಯಕ್ರಮ ರವಿವಾರ ಬೆಳಗ್ಗೆ ಮೂಡುಬಿದಿರೆಯಲ್ಲಿ ಜರಗಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ದ.ಕ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನೇತೃತ್ವ ದಲ್ಲಿ ಸ್ವರಾಜ್ಯಮೈದಾನದಿಂದ ಆರಂಭಗೊಂಡ ಈ ಮತದಾರರ ಜಾಗೃತಿ ಓಟ, ಮ್ಯಾರಥಾನ್ 2019 ಉದ್ಘಾಟನಾ ಸಮಾರಂಭದಲ್ಲಿ ಮೂಲ್ಕಿ ಚರ್ಚ್ನ ರೆ.ಫಾ. ಗೋಮ್ಸ್ ಮಾತನಾಡಿ ಮತದಾನವೇ ನಿಜವಾದ ಪ್ರಜಾಪ್ರಭುತ್ವ, ಮತದಾನದಿಂದ ಪ್ರಜಾಪ್ರಭುತ್ವ ಸದೃಢಗೊಳ್ಳಲು ಸಾಧ್ಯ ಎಂದರು.
16 ವರ್ಷ ಒಳಗಿನ ಮತ್ತು ಮೇಲ್ಪಟ್ಟ ಬಾಲಕ, ಬಾಲಕಿಯರ ಮ್ಯಾರಥಾನ್ 18.ಕಿ.ಮೀ ಓಟ, ಸಾರ್ವಜನಿಕರಿಗೆ ಮತದಾನದ ಕಡೆಗೆ ಸೌಹಾರ್ದ ನಡಿಗೆ ಕಾರ್ಯಕ್ರಮದಲ್ಲಿ 1350 ಓಟಗಾರರು ಸೇರಿದಂತೆ ಸಸಂಘ, ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು. 16 ವರ್ಷದ ಒಳಗಿನ ಬಾಲಕ, ಬಾಲಕಿಯರು ಸ್ವರಾಜ್ಯ ಮೈದಾನ ಬಳಿ ಮಾರಿಗುಡಿ ಆವರಣದಿಂದ ಓಟ ಆರಂಭಿಸಿ ಶ್ರೀ ಹನುಮಂತ ದೇವಸ್ಥಾನ ಎದುರಿನ ರಸ್ತೆಯಾಗಿ ಎಡಕ್ಕೆ ತಿರುಗಿ ಜೈನ್ಪೇಟೆ, ಅಲಂಗಾರು, ಕೊಡ್ಯಡ್ಕರಸ್ತೆಯಿಂದ ವರ್ತುಲ ರಸ್ತೆಯಾಗಿ ಸ್ವರಾಜ್ಯ ಮೈದಾನ , 16 ವರ್ಷದ ಮೇಲ್ಪಟ್ಟ ಬಾಲಕ, ಬಾಲಕಿಯರು ಸ್ವರಾಜ್ಯ ಮೈದಾನ, ಮುಖ್ಯರಸ್ತೆ, ಶ್ರೀ ಹನುಮಂತ ದೇವಸ್ಥಾನ ಮುಖ್ಯರಸ್ತೆಯಾಗಿ ಹಳೆಪೊಲೀಸ್ಠಾಣೆ, ಜ್ಯೋತಿನಗರ, ಮಹಾವೀರ ಕಾಲೇಜು, ಕೊಡಂಗಲ್ಲು, ಕೋಟೆಬಾಗಿಲು, ಜೈನ್ಪೇಟೆ, ಅಲಂಗಾರು, ಕೊಡ್ಯಡ್ಕರಸ್ತೆ, ವರ್ತುಲರಸ್ತೆಯಾಗಿ ಸ್ವರಾಜ್ಯಮೈದಾನದವರೆಗಿನ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದರು. ಸಾರ್ವಜನಿಕರು ಸ್ವರಾಜ್ಯ ಮೈದಾನದಿಂದ ಮುಖ್ಯರಸ್ತೆಯಾಗಿ ಸಾವಿರ ಕಂಬದ ಬಸದಿವರೆಗೆ ಸೌಹಾರ್ದ ನಡಿಗೆಯಲ್ಲಿ ಗಮನ ಸೆಳೆದರು.
ವಿಜೇತರು: 16 ವರ್ಷ ಮೇಲ್ಪಟ್ಟ ಬಾಲಕರ ಮ್ಯಾರಥಾನ್: 1. ಶಶಿಧರ್ ಬಿ.ಎಲ್ 2. ಕೆ. ಹನುಮೇಶ,3. ಪ್ರಶಾಂತ್ ಕುಮಾರ್ ಎಂ.ಎಚ್, 4, ಬಸವರಾಜ ನೀಲಪ್ಪ ಗೋಡಿ,5. ಸತೀಶ್ ಹೆಚ್. ಎಂ. (ಎಲ್ಲರೂ ಆಳ್ವಾಸ್) ಬಾಲಕಿಯರ ವಿಭಾಗದಲ್ಲಿ 1.ಚೈತ್ರಾ ದೇವಾಡಿಗ,2, ಪ್ರಿಯಾ ಎಲ್.ಡಿ, 3. ಮಾಲಾಶ್ರೀ ಎಂ.ಬಿ, 4, ಚೈತ್ರಾ ಪಿ, 5. ದೀಕ್ಷಾ ಬಿ (ಎಲ್ಲರೂ ಆಳ್ವಾಸ್).
16 ವರ್ಷದೊಳಗಿನ ಬಾಲಕರ ಮ್ಯಾರಥಾನ್: 1. ಅಂಜುಮಾನ್ (ಸರ್ಕಾರಿ ಪ್ರೌಢಶಾಲೆ ಬಡಗ ಎಕ್ಕಾರು)2. ಭರಮಪ್ಪ ಬಿ.ಎನ್,3. ರಾಘು ಎ. ಲಮಾಣಿ, 4, ದಶರಥ ,5.ಸೃಜನ್. (ಎಲ್ಲರೂ ಆಳ್ವಾಸ್) ಬಾಲಕಿಯರ ವಿಭಾಗದಲ್ಲಿ 1.ಚೈತ್ರಾ ಎನ್.ಸಿ,2, ಪ್ರಣಮ್ಯ ಎನ್, 3. ವಿಂಧ್ಯಾ ಎನ್,4, ಪವಿತ್ರಾ ಹೆಚ್.ಕೆ. 5. ಅಂಕಿತಾ ಬಿ.ಐ(ಎಲ್ಲರೂ ಆಳ್ವಾಸ್).
ದ.ಕ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸ್ವೀಪ್ ನೋಡಲ್ ಅಧಿಕಾರಿ ಡಾ. ಸೆಲ್ವಮಣಿ, ಪೋಲೀಸ್ ಕಮಿಶನರ್ ಸಂದೀಪ್ ಪಾಟೀಲ್, ಎಸಿಪಿ ಶ್ರೀನಿವಾಸ್ ಗೌಡ, ತಹಶೀಲ್ದಾರ್ ಸುದರ್ಶನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಸ್ವೀಪ್ ಕಾರ್ಯದರ್ಶಿ ಸುಧಾಕರ್, ತಾಲೂಕು ಒಕ್ಕೂಟದ ಅಧ್ಯಕ್ಷ ಗಿರೀಶ್ ಶೆಟ್ಟಿ,ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿ ಸೋಜಾ ಸ್ವಾಗತಿಸಿದರು. ತಾಲೂಕು ಸಹಾಯಕ ನಿರ್ದೇಶಕಿ ಲಿಲ್ಲಿ ಪಾಯಸ್ ವಂದಿಸಿದರು. ಕ್ರೀಡಾ ನಿರ್ದೇಶಕ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.