ಮಂಗಳೂರು: ಈಜುಕೊಳದಲ್ಲಿ ಮುಳುಗಿ ಯುವಕ ಮೃತ್ಯು
ಮಂಗಳೂರು, ಮಾ. 24: ನಗರ ಪಾಲಿಕೆ ಅಧೀನದ ಈಜುಕೊಳದ ನೀರಿನಲ್ಲಿ ಯುವಕನೋರ್ವ ಆಕಸ್ಮಿಕ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ.
ಮರೋಳಿ ನಿವಾಸಿ ಯಜ್ಞೇಶ್ (19) ಮೃತ ಯುವಕ.
ಘಟನೆ ವಿವರ: ರವಿವಾರ ಮಧ್ಯಾಹ್ನ ಯಜ್ಞೇಶ್ ತನ್ನ ನಾಲ್ಕೈದು ಸ್ಮೇಹಿತರ ಜೊತೆ ಈಜು ಕಲಿಯಲೆಂದು ಮನೆಯಿಂದ ಹೊರಟಿದ್ದು, ಕೆಲಹೊತ್ತಿನಲ್ಲೇ ಮಂಗಳಾ ಕ್ರೀಡಾಂಗಣದ ಈಜುಕೊಳಕ್ಕೆ ಬಂದಿದ್ದಾರೆ. ಈಜುವ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದು, ಕೂಡಲೇ ಯಜ್ಞೇಶ್ ರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೃತ ಯುವಕನು ನೀರಿನಲ್ಲಿ ಈಜಾಡುವಾಗ ಡೈವ್ ಹೊಡೆದಿದ್ದಾನೆ. ಈ ವೇಳೆ ನೀರು ಮೂಗಿನಿಂದ ತಲೆಗೆ ಏರಿದ್ದರಿಂದಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಐದು ಅಡಿ ಎತ್ತರದ ಜಾಗದಲ್ಲಿ ಈಜಬೇಕಾಗಿದ್ದ ಯುವಕನು ಆರು ಅಡಿ ಎತ್ತರ ಪೂಲ್ನಲ್ಲಿ ಈಜುವ ದುಸ್ಸಾಹಸಕ್ಕೆ ಕೈಹಾಕಿದ್ದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.
ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಥಮ ಚಿಕಿತ್ಸೆ ನೀಡಲಾಗಿತ್ತು
ಮಂಗಳಾ ಕ್ರೀಡಾಂಗಣದ ಈಜುಕೊಳಕ್ಕೆ ಈಜಾಡಲು ಬಂದ ಯುವಕನು ಸ್ವಲ್ಪ ಸಮಯದಲ್ಲೇ ಅಸ್ವಸ್ಥಗೊಂಡಿದ್ದು, ಈಜುಕೊಳದಿಂದ ಯುವಕನನ್ನು ಕೂಡಲೇ ಹೊರತಂದು ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬಳಿಕ ಯುವಕನ ಪೋಷಕರಿಗೆ ಮಾಹಿತಿ ನೀಡಲಾಯಿತು. ಅಸ್ವಸ್ಥಗೊಂಡ ಯುವಕನನ್ನು ಆತನ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರು ಎಂದು ಮಂಗಳಾ ಈಜುಕೊಳದ ಕಾರ್ಯ ನಿರ್ವಾಹಕ ಅಭಿಯಂತರ ರಮೇಶ್ ಅವರು ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.