ಚುನಾವಣೆ ನೀತಿ ಸಂಹಿತೆ ಹೆಸರಿನಲ್ಲಿ ಮಾರ್ತೆದಾರರಿಗೆ ಕಿರುಕುಳ ಆರೋಪ: ದೂರು
ಉಡುಪಿ, ಮಾ. 24: ಜಿಲ್ಲೆಯಾದ್ಯಂತ ಶೇಂದಿ ತೆಗೆದು ಬದುಕುವ ಮೂರ್ತೆದಾರರಿಗೆ ಚುನಾವಣೆಯ ನೀತಿ ಸಂಹಿತೆಯ ಹೆಸರಿನಲ್ಲಿ ಅಬಕಾರಿ ಅಧಿಕಾರಿ ಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಅಬಕಾರಿ ಜಿಲ್ಲಾಧಿಕಾರಿ ಜೊತೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ಸಂತ್ರಸ್ತರನ್ನೊಳಗೊಂಡ ನಿಯೋಗ ಇಂದು ಮಾತುಕತೆ ನಡೆಸಿತು.
ಅಬಕಾರಿ ಅಧಿಕಾರಿಗಳು ಶೇಂದಿ ತೆಗೆಯುವುದನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿ, ತಪ್ಪಿದಲ್ಲಿ ಬಂಧಿಸುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ಸಂತ್ರಸ್ತರು ದೂರು ನೀಡಿದ್ದರು. ಅದರ ಹಿನ್ನೆಲೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ, ಕರಾವಳಿ ಜಿಲ್ಲೆಯಲ್ಲಿ ಶೇಂಧಿ ತೆಗೆದು ಬದುಕುವ ವೃತ್ತಿ ನಿರತರು ಕಾನೂನು ಬದ್ಧವಾಗಿ ಶೇಂಧಿ ಮಾರಾಟ ಮಾಡುತ್ತಿರುವುದರಿಂದ ನೀತಿ ಸಂಹಿತೆಯ ಹೆಸರಿನಲ್ಲಿ ಅವರಿಗೆ ಕಿರುಕುಳ ನೀಡಬಾರದೆಂದು ತಿಳಿಸಿದರು.
ಸಂತ್ರಸ್ತರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಹೆಬ್ಸಿಭಾ ರಾಣಿ ಕೊರ್ಲ ಪಾಟಿ, ಯಾವುದೇ ಕಾರಣಕ್ಕೂ ಮೂರ್ತೆದಾರರಿಗೆ ತೊಂದರೆ ಕೊಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ಜಿಲ್ಲೆಯ ವಿವಿಧ ಕಡೆಗಳಿಂದ ಬಂದ ಮೂರ್ತೆದಾರರ ಮುಖಂಡರು ಉಪಸ್ಥಿತರಿದ್ದರು.