ದ.ಕ. ಲೋಕ ಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ: ನಳಿನ್ ಕುಮಾರ್ ಕಟೀಲ್
'ಗ್ರಾಮ ಗ್ರಾಮಗಳಲ್ಲಿ ಬಜರಂಗದಳ ಸಂಘಟನೆ ಆರಂಭವಾಗಲಿದೆ'
ಮಂಗಳೂರು, ಮಾ. 25: ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಇಲ್ಲಿ ಮೋದಿ ಅಲೆಯಲ್ಲ ಸುನಾಮಿಯೇ ಎದ್ದಿದೆ ಪರಿಣಾಮವಾಗಿ ಇಲ್ಲಿ ಬಿಜೆಪಿ ಖಂಡಿತ ಜಯಸಾಧಿಸುತ್ತದೆ ಎನ್ನುವ ವಿಶ್ವಾಸವಿದೆ ಎಂದು ದ.ಕ ಲೋಕ ಸಭಾ ಕ್ಷೇತ್ರದ ಬಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ನಗರದ ಬಂಟ್ಸ್ ಹಾಸ್ಟೆಲ್ ಬಳಿ ಅವರು ಇಂದು ಬಿಜೆಪಿ ಕಚೇರಿ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು. 2009ರಲ್ಲಿ ನಾನು ಪ್ರಥಮ ಬಾರಿಗೆ ಅಭ್ಯರ್ಥಿಯಾಗಿ ಆಶೀರ್ವಾದ ಮಾಡಿದ ಮತದಾರರು ಎರಡನೆ ಬಾರಿ ನನ್ನನ್ನು ಆಯ್ಕೆ ಮಾಡಿ ಆಶೀರ್ವಾದ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮತದಾರರ ನಂಬಿಕೆಗೆ ಚ್ಯುತಿ ಬಾರದಂತೆ ರಾಜಕಾರಣ ಮಾಡಿದ್ದೇನೆ. ಕಳೆದ 5ವರ್ಷದಲ್ಲಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಕಷ್ಟು ಉತ್ತಮ ಯೋಜನೆಗಳು, ದ.ಕ ಲೋಕ ಸಭಾ ಕ್ಷೇತ್ರದಲ್ಲಿ 16,500 ಕೋಟಿ ರೂಪಾಯಿಗಳ ಯೋಜನೆಗಳು ಅನುಷ್ಠಾನಗೊಂಡಿದೆ. 5 ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಪರಿಣಾಮವಾಗಿ ಇಲ್ಲಿ ಮೋದಿ ಅಲೆಯಲ್ಲ ಸುನಾಮಿಯ ರೀತಿಯ ಬೃಹತ್ ಅಲೆ ಎದ್ದಿದೆ, ಮತದಾರರು ಬಿಜೆಪಿ ಪರವಾಗಿದ್ದಾರೆ. 10 ವರ್ಷಗಳಲ್ಲಿ ಭ್ರಷ್ಟಾಚಾರ ರಹಿತವಾಗಿ ರಾಜಕಾರಣ ಮಾಡಿದ್ದೇನೆ ಎಂದು ನಳಿನ್ ಕುಮಾರ್ ತಿಳಿಸಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ 7 ವಿಧಾನ ಸಭಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಜಯಗಳಿಸಿದೆ. ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಜಯಗಳಿಸಲು ಸಾಧ್ಯವಾಗಿದೆ. ಈ ಬಾರಿ ಆ ಒಂದು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಬಿಜೆಪಿ ಮೇಲುಗೈ ಸಾಧಿಸುವ ಮೂಲಕ ಕ್ಷೇತ್ರದ ಮತದಾರರು,ಕಾರ್ಯಕರ್ತರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
'ಗ್ರಾಮ ಗ್ರಾಮಗಳಲ್ಲಿ ಬಜರಂಗದಳ ಸಂಘಟನೆ ಆರಂಭವಾಗಲಿದೆ'
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸುತ್ತೇವೆ ಎನ್ನುವ ಹೇಳಿಕೆ ನೀಡುವ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಅದನ್ನು ಮಾಡಿ ತೋರಿಸಲಿ ಎಂದು ಸುನಿಲ್ ಕುಮಾರ್ ಸವಾಲೆಸೆದರು.
ಮುಂದಿನ ಹಂತದಲ್ಲಿ ಗ್ರಾಮ ಗ್ರಾಮಗಳಲ್ಲಿ ಬಜರಂಗದಳವನ್ನು ಆರಂಭಿಸುತ್ತೇವೆ ಎಂದು ಬಿಜೆಪಿ ಚುನಾವಣಾ ಕಚೇರಿಯನ್ನು ಉದ್ಘಾಟಿಸಿದ ಸುನಿಲ್ ಕುಮಾರ್ ತಿಳಿಸಿದರು.
ರಾಷ್ಟದ ದೃಷ್ಟಿಯಿಂದ ಈ ಬಾರಿಯ ಚುನಾವಣೆ ಮಹತ್ವದ ಚುನಾವಣೆಯಾಗಿದೆ. ಮೋದಿ ತೆಗೆದುಕೊಂಡ ತೀರ್ಮಾನಗಳನ್ನು ಸಂಪೂರ್ಣವಾಗಿ ಅನುಷ್ಠಾನ ಗೊಳಿಸಲು ಈ ಬಾರಿ ಮೋದಿಯನ್ನು ಅಧಿಕಾರಕ್ಕೆ ತರಬೇಕು ಎಂದು ಅವರು ಹೇಳಿದರು.
ವಾಯುದಾಳಿಯ ಮೂಲಕ ಭಾರತ ಶಕ್ತಿ ಶಾಲಿ ರಾಷ್ಟ್ರ ಎನ್ನುವ ಸಂದೇಶವನ್ನು ಮೋದಿ ನೀಡಿದ್ದಾರೆ. ವಿಪಕ್ಷಗಳು ಮೋದಿಯನ್ನು ಸೋಲಿಸಲು ಮಹಾಘಟ್ ಬಂಧನ್ ನಡೆಸಿವೆ. ಈ ಘಟ್ ಬಂಧನ್ ಅಭಿವೃದ್ಧಿಗಾಗಿ ಅಲ್ಲ ಎಂದು ಸುನಿಲ್ ಕುಮಾರ್ ಟೀಕಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಸಂಜೀವ ಮಟಂದೂರು ಸ್ವಾಗತಿಸಿದರು. ಸಮಾರಂಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಉಮಾನಾಥ ಕೊಟ್ಯಾನ್, ಡಾ.ಭರತ್ ಶೆಟ್ಟಿ, ಅಂಗಾರ, ರಾಜೇಶ್ ನಾಯ್ಕ್, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಕೃಷ್ಣಾ ಜೆ ಪಾಲೆಮಾರ್, ಬಿಜೆಪಿ ಮುಖಂಡರಾದ ಯೋಗೀಶ್ ಭಟ್, ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಭಾರತಿ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಗೊಪಾಲಕೃಷ್ಣ ಹೇರಳೆ, ಪ್ರಭಾಕರ ಬಂಗೇರ, ಮೋನಪ್ಪ ಭಂಡಾರಿ, ಗಣೇಶ್ ಕಾರ್ನಿಕ್ , ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೊಡು, ಉಪಾಧ್ಯಕ್ಷೆ ಕಸ್ತೂರಿ ಪಂಜ ಮೊದಲಾದವರು ಉಪಸ್ಥಿತರಿದ್ದರು.