ನೌಕಾಪಡೆ ಮೇಲಿನ ಆರೋಪ ದೇಶದ್ರೋಹಿ ಮನಸ್ಥಿತಿಯ ಸಂಕೇತ: ಬಿಜೆಪಿ
ಉಡುಪಿ, ಮಾ. 25: ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟಿನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದೇಶದ ರಕ್ಷಣೆಯ ಹೊಣೆ ಹೊತ್ತ ಭಾರತೀಯ ನೌಕಾಪಡೆಯ ಮೇಲೆಯೇ ಆರೋಪ ಹೊರಿಸುತ್ತಿರುವುದು ಪ್ರಮೋದ್ ಮಧ್ವರಾಜ್ ಅವರ ದೇಶದ್ರೋಹಿ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಪ್ರತಿಕ್ರಿಯೆ ನೀಡಿದೆ.
ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟ್ ಮತ್ತು ಅದರಲ್ಲಿದ್ದ ಮೀನುಗಾರರ ಪತ್ತೆಗೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಕೇಂದ್ರ ಸರಕಾರ ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡುತ್ತಿದ್ದು, ಪತ್ತೆಗೆ ಪ್ರಯತ್ನ ಮುಂದುವರಿ ದಿದೆ. ನಾಪತ್ತೆಯಾಗಿರುವ ಎಲ್ಲಾ ಮೀನುಗಾರರೂ ಸುರಕ್ಷಿತವಾಗಿ ಮರಳುವ ವಿಶ್ವಾಸ ಇನ್ನೂ ನಮಗಿದೆ. ಹೀಗಿರುವಾಗ ಈ ಬೋಟ್ ನಾಪತ್ತೆ ಪ್ರಕರಣದ ಬಗ್ಗೆ ರಾಜಕೀಯ ಮಾಡುವುದನ್ನು ಬಿಜೆಪಿ ಸಹಿಸದು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಮೈತ್ರಿ ಕೂಟದ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸುತ್ತಿರುವ ಪ್ರಮೋದ್ ಚುನಾವಣೆಯಲ್ಲಿ ಗೆಲ್ಲಲಾರರು. ಚುನಾವಣೆ ಮುಗಿದ ಬಳಿಕ ಇವರು ಯಾವ ಪಕ್ಷದ ಜೊತೆ ಗುರುತಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಲೋಕಸಭಾ ಕ್ಷೇತ್ರದ ಜನತೆಗೆ ಈಗಲೇ ಸ್ಪಷ್ಟನೆ ನೀಡಬೇಕು ಎಂದು ಕುಯಿಲಾಡಿ ಸುರೇಶ್ ನಾಯಕ್ ಅಗ್ರಹಿಸಿದ್ದಾರೆ.