ಎ.8: ಮಣಿಪಾಲದಲ್ಲಿ ರಾಬಿನ್ ಸಿಂಗ್ ಕ್ರಿಕೆಟ್ ಅಕಾಡೆಮಿ ಉದ್ಘಾಟನೆ
ಎಳೆಯರಿಗೆ 40 ದಿನಗಳ ಕ್ರಿಕೆಟ್ ತರಬೇತಿ ಶಿಬಿರಕ್ಕೆ ಚಾಲನೆ
ಮಣಿಪಾಲ, ಮಾ. 25: ರಾಜ್ಯ ಕರಾವಳಿ ಭಾಗದ ಕ್ರಿಕೆಟ್ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಬಹುದಾದ ರಾಬಿನ್ ಸಿಂಗ್ ಕ್ರಿಕೆಟ್ ಅಕಾಡೆಮಿ ಇದೇ ಎ.8ರಂದು ಮಾಹೆ ವಿವಿಯ ಎಂಡ್ಪಾಯಿಂಟ್ ಕ್ರಿಕೆಟ್ ಮೈದಾನದಲ್ಲಿ ಸ್ಥಾಪನೆಯಾಗಲಿದೆ.
ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ರಾಬಿನ್ ಸಿಂಗ್ ಅವರು ಈಗಾಗಲೇ ಚೆನ್ನೈ ಮತ್ತು ದುಬೈಗಳಲ್ಲಿ ಕ್ರಿಕೆಟ್ ಅಕಾಡಮಿಯನ್ನು ಸ್ಥಾಪಿಸಿದ್ದು, ಮಣಿಪಾಲದ ಅಕಾಡೆಮಿ ಮೂಲಕ ಇಲ್ಲಿನ ಗ್ರಾಮೀಣ ಭಾಗದ ಪ್ರತಿಭಾವಂತ ಕ್ರಿಕೆಟ್ ಪಟುಗಳನ್ನು ಗುರುತಿಸಿ ತರಬೇತಿ ನೀಡುವ ಮೂಲಕ ಅವರನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ಯುವಲ್ಲಿ ಸಹಕರಿಸುವ ನಿಟ್ಟಿನಲ್ಲಿ ಮಾಹೆ ವಿವಿಯೊಂದಿಗೆ ಈಗಾಗಲೇ ಒಪ್ಪಂದವನ್ನು ಮಾಡಿ ಕೊಂಡಿದ್ದಾರೆ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ವಿವಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾಕ್ರಿಕೆಟ್ ಸಂಸ್ಥೆ (ಯುಡಿಸಿಎ) ಇವರ ಜೊತೆ ಸೇರಿ ಮಣಿಪಾಲದಲ್ಲಿ 6ರಿಂದ 19ವರ್ಷದೊಳಗಿನ ಎಳೆಯ ಕ್ರಿಕೆಟ್ ಪ್ರತಿಭೆಗಳಿಗಾಗಿ 40ದಿನಗಳ ಕ್ರಿಕೆಟ್ ತರಬೇತಿ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರ ಎ.8ರಿಂದ 40ದಿನಗಳ ಕಾಲ ನಡೆಯಲಿದ್ದು, ಬಾಲಕ-ಬಾಲಕಿಯರು ತರಬೇತಿಯಲ್ಲಿ ಪಾಲ್ಗೊಳ್ಳಬಹುದು ಎಂದು ಡಾ. ಬಲ್ಲಾಳ್ ತಿಳಿಸಿದರು.
ರಾಬಿನ್ ಸಿಂಗ್ ಅವರು ಈ ಮೊದಲು ಭಾರತ ಕ್ರಿಕೆಟ್ ತಂಡದ ಕೋಚ್ ಆಗಿದ್ದು, ಇದೀಗ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ ತಂಡದ ಕೋಚ್ ಆಗಿದ್ದಾರೆ. ಇಲ್ಲಿ ಪ್ರಾರಂಭಗೊಳ್ಳುವ ಅಕಾಡೆಮಿ ಮೂಲಕ ಬೆಳಕಿಗೆ ಬರುವ ಕ್ರಿಕೆಟ್ ಪ್ರತಿಭೆಗಳಿಗೆ ಮೇಲಿನ ಹಂತಕ್ಕೇರುವ ಉಜ್ವಲ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ.ಕೃಷ್ಣ ಪ್ರಸಾದ್ ತಿಳಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕ್ರಿಕೆಟ್ನ ಅಭಿವೃದ್ಧಿಗಾಗಿ ಹಲವು ಪೂರಕ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಅಕಾಡೆಮಿ ವತಿಯಿಂದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಎ.8ರಿಂದ ಬೆಳಗ್ಗೆ 7 ಗಂಟೆಗೆ ಪ್ರಾರಂಭಗೊಳ್ಳಲಿದೆ. ಪ್ರತಿದಿನ ಮೂರು ಹಂತದಲ್ಲಿ ತರಬೇತಿ ನೀಡಲಾಗುವುದು. ಬೆಳಗ್ಗೆ 7 ರಿಂದ 9 ರವರೆಗೆ, 9:30ರಿಂದ 11:30 ರವರೆಗೆ ಹಾಗೂ ಸಂಜೆ 4 ರಿಂದ 6 ರವರೆಗೆ ಈ ತರಬೇತಿ ನೀಡಲಾಗು ತ್ತದೆ. ಪ್ರತಿ ತರಬೇತಿ ಅವಧಿಯಲ್ಲಿ ತಲಾ 40 ಮಂದಿಗೆ ಅವಕಾಶ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿ ಮಹಿಳಾ ತಂಡವನ್ನು ತರಬೇತುಗೊಳಿಸುವ ನಿಟ್ಟಿನಲ್ಲಿ ಅದಕ್ಕೆ ವಿಶೇಷ ಗಮನ ನೀಡಲಾಗುವುದು ಎಂದು ಮಾಹೆಯ ಕ್ರೀಡಾ ಮಂಡಲಿಯ ಕಾರ್ಯದರ್ಶಿ ಡಾ. ವಿನೋದ್ ನಾಯಕ್ ತಿಳಿಸಿದರು.
ತರಬೇತಿಯ ವೇಳೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪ್ರತಿಭಾನ್ವಿತ ಕ್ರಿಕೆಟಿಗರು ಶಿಬಿರಕ್ಕೆ ಬಂದು ತಮ್ಮ ಪರಿಣತಿಯನ್ನು ಹಂಚಿಕೊಳ್ಳಲಿದ್ದಾರೆ. ಇತರ ಅಕಾಡೆಮಿ ತಂಡಗಳೊಂದಿಗೆ ಪಂದ್ಯಗಳನ್ನು ಆಡುವ ಮೂಲಕ ಶಿಬಿರಾರ್ಥಿಗಳ ಸಾಮರ್ಥ್ಯ-ಅನುಭವವನ್ನು ಒರೆಗೆ ಹಚ್ಚುವ ಪ್ರಯತ್ನ ನಡೆಸಲಾಗುವುದು. ಶಿಬಿರಾರ್ಥಿಗಳಿಗೆ ಸರ್ವಾಂಗೀಣ ತರಬೇತಿ ನೀಡಲಾಗುತ್ತದೆ. ಪ್ರತಿಯೊಬ್ಬ ಆಟಗಾರರ ವೈಯಕ್ತಿಕ ಸಾಮರ್ಥ್ಯ ಪರಿಶೀಲನೆ, ಉನ್ನತ ಮಟ್ಟದ ಫಿಲ್ಡಿಂಗ್ ತರಬೇತಿ, ಗುರಿಪೂರ್ಣ ನೆಟ್ ತರಬೇತಿ, ಮ್ಯಾಚ್ ನಿರ್ವಹಣಾ ತರಬೇತಿ, ದೈಹಿಕ-ಮಾನಸಿಕ ಕ್ಷಮತೆಗೆ ಪರಿಣತರಿಂದ ತರಬೇತಿ ನೀಡಲಾಗುತ್ತದೆ ಎಂದು ಸಂಸ್ಥೆಯ ಕಾರ್ಯದಶಿರ್ ಬಾಲಕೃಷ್ಣ ಪರ್ಕಳ ವಿವರಿಸಿದರು.
ಈ ಶಿಬಿರದಲ್ಲಿ ಪಾಲ್ಗೊಳ್ಳ ಬಯಸುವ 6ರಿಂದ 19 ವರ್ಷ ವಯಸ್ಸಿನ ಬಾಲಕ -ಬಾಲಕಿಯರು ಹೆಸರು ನೋಂದಾವಣೆಗೆ ರೆನ್ ಟ್ರೆವರ್ (9902537030), ಶ್ರೀಧರ್(9880114930), ಜಸ್ಟಿನ್ (7019699862) ಇವರನ್ನು ಸಂಪರ್ಕಿಸುವಂತೆ ಡಾ.ವಿನೋದ್ ನಾಯಕ್ ತಿಳಿಸಿದರು.