ಶಂಕರನಾರಾಯಣ: ಐಸ್ಕ್ರೀಂ ತಿಂದು ಮಕ್ಕಳು ಸಹಿತ 50ಕ್ಕೂ ಅಧಿಕ ಮಂದಿ ಅಸ್ವಸ್ಥ
ಶಂಕರನಾರಾಯಣ, ಮಾ. 25: ಬೆಳ್ವೆ ಹಾಗೂ ಹೆಂಗವಳ್ಳಿ ಗ್ರಾಪಂ ವ್ಯಾಪ್ತಿ ಯಲ್ಲಿ ಕಳೆದ ಎರಡು ದಿನಗಳಿಂದ ಐಸ್ಕ್ರೀಂ ತಿಂದ ಮಕ್ಕಳು ಸೇರಿದಂತೆ ಸುಮಾರು 50ಕ್ಕೂ ಅಧಿಕ ಗ್ರಾಮಸ್ಥರು ಅಸ್ವಸ್ಥಗೊಂಡ ಬಗ್ಗೆ ವರದಿಯಾಗಿದೆ.
ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಏಳು ಮಂದಿ ಮಕ್ಕಳು ಸಹಿತ ಒಂಭತ್ತು ಮಂದಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ತೀವ್ರವಾಗಿ ಅಸ್ವಸ್ಥಗೊಂಡ ಮೂವರ ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.
ಮಾ.23 ಮತ್ತು 24ರಂದು ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಈ ಬೆಳ್ವೆ ಹಾಗೂ ಹೆಂಗವಳ್ಳಿ ಗ್ರಾಪಂ ವ್ಯಾಪ್ತಿಯ ಮನೆ ಮನೆಗಳಿಗೆ ಐಸ್ಕ್ರೀಂ ಮಾರಾಟ ಮಾಡಿಕೊಂಡು ಬಂದಿದ್ದು, ಆತನಿಂದ ಕಪ್ಪು ಬಣ್ಣದ ಐಸ್ಕ್ಯಾಂಡಿಯನ್ನು ಬಹುತೇಕ ಮಂದಿ ಖರೀದಿಸಿ ತಿಂದಿದ್ದರು.
ಇದರ ಪರಿಣಾಮ ಮಾ.23ರಂದು ಐಸ್ಕ್ಯಾಂಡಿ ತಿಂದವರಿಗೆ ಮರುದಿನ ರವಿವಾರ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಅವರೆಲ್ಲ ಖಾಸಗಿ ಕ್ಲಿನಿಕ್ಗಳಲ್ಲಿ ಔಷಧಿ ಪಡೆದುಕೊಂಡಿದ್ದರು. ಆದರೆ ಮಾ.24ರಂದು ಐಸ್ಕ್ರೀಂ ತಿಂದವರು ಸೋಮವಾರ ತೀವ್ರ ಅಸ್ವಸ್ಥಗೊಂಡಿದ್ದರು. ಇವರೆಲ್ಲರೂ ವಾಂತಿಬೇಧಿ, ಜ್ವರ, ಮೈಕೈನೋವು, ತಲೆಸುತ್ತು, ಹೊಟ್ಟೆ ನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು.
ಬೆಳ್ವೆ ಗ್ರಾಮದ ಗುಮ್ಮಲ ಹಾಗೂ ಹೆಂಗವಳ್ಳಿ ಗ್ರಾಮದ ತೊಂಬತ್ತು ಪ್ರದೇಶದ ಸುಮಾರು 11 ಮಕ್ಕಳು ಸೇರಿದಂತೆ ಒಟ್ಟು 48 ಮಂದಿ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇವರಲ್ಲಿ 21 ಮಂದಿ ಒಳರೋಗಿಯಾಗಿ ದಾಖಲಾಗಿ ಸಂಜೆ ವೇಳೆ ಬಿಡುಗಡೆ ಹೊಂದಿದ್ದಾರೆ.
ಅಲ್ಲದೆ ಕೆಲವು ಮಂದಿ ಹಾಲಾಡಿ, ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಐಸ್ಕ್ರೀಂ ಮಾರಾಟ ಮಾಡಿದ ಉತ್ತರ ಭಾರತ ಕಾರ್ಮಿಕರ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದು, ಪೊಲೀಸರು ಹುಡುಕುವ ಕೆಲಸ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಗ್ರಾಮಸ್ಥರು ಕೂಡ ಎಚ್ಚರ ವಹಿಸಿದ್ದಾರೆ ಎಂದು ಸ್ಥಳೀಯರಾದ ಉದಯ ಕುಮಾರ್ ಪೂಜಾರಿ ತಿಳಿಸಿದ್ದಾರೆ.
‘ಐಸ್ಕ್ರೀಂ ತಿಂದು ಅಸ್ವಸ್ಥರಾದ ಹೆಚ್ಚಿನವರಿಗೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಐಸ್ಕ್ರೀಂ ತಯಾರಿಸುವಾಗ ಬಳಸಿದ ಮಲೀನ ನೀರಿನಲ್ಲಿದ್ದ ಬ್ಯಾಕ್ಟಿರಿ ಯಾದಿಂದ ಈ ಸಮಸ್ಯೆ ಕಾಣಿಸಿಕೊಂಡಿರಬಹುದು. ಅಸ್ವಸ್ಥರಾದವರ ಮಲವನ್ನು ಪರೀಕ್ಷೆಗಾಗಿ ಉಡುಪಿ ಜಿಲ್ಲಾಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡ ಲಾಗಿದೆ. ಗ್ರಾಮಕ್ಕೆ ತೆರಳಿ ಅಸ್ವಸ್ಥರಾದವರ ಬಗ್ಗೆ ಸರ್ವೆ ಕಾರ್ಯ ನಡೆಸಲು ಉದ್ದೇಶಿಸಲಾಗಿದೆ’ ಎಂದು ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್ವರಿ ತಿಳಿಸಿದ್ದಾರೆ.