ಸೀಟು ಹೊಂದಾಣಿಕೆ ಹಿಂದೆ ಅನೇಕ ರಹಸ್ಯ: ಸಚಿವೆ ಜಯಾಮಾಲ
ಉಡುಪಿ, ಮಾ. 25: ಸಮಾಜ ಒಡೆಯುವ ಕೋಮುವಾದಿ ಬಿಜೆಪಿ ಪಕ್ಷವನ್ನು ದೂರ ಇಡಲು ನಾವು ಒಟ್ಟಾಗಿ ಕೆಲಸ ಮಾಡಬೇಕು. ಈ ಹೊಂದಾಣಿಕೆ ಹಿಂದೆ ಅನೇಕ ರಹಸ್ಯಗಳಿವೆ ಹಾಗೂ ಸತ್ವಗಳಿವೆ. ಅದೇ ಕಾರಣಕ್ಕೆ ಎರಡು ಪಕ್ಷದವರು ಸೇರಿ ಪ್ರಮೋದ್ ಅವರನ್ನು ಕಣಕ್ಕೀಳಿಸಿದ್ದೇವೆ. ಆದುದರಿಂದ ನೀವು ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕು. ಸುಳ್ಳು ಹೇಳುವ ಪಕ್ಷಕ್ಕೆ ಅವಕಾಶ ಮಾಡಿ ಕೊಡಬಾರದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಾಮಾಲ ಹೇಳಿದ್ದಾರೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ನಾಮಪತ್ರ ಸಲ್ಲಿಸುವ ಮುನ್ನ ಉಡುಪಿ ಕಾಂಗ್ರೆಸ್ ಭವನದಲ್ಲಿ ಸೋಮವಾರ ಆಯೋಜಿಸಲಾದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಕೋಮುವಾದಿ ಪಕ್ಷವನ್ನು ದೂರ ಇರಿಸಲು ಮೈತ್ರಿ ಮಾಡಿಕೊಳ್ಳಲಾಗಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ. ಕಳೆದ ಬಾರಿ ಕುತಂತ್ರದಿಂದ ಆಗಿರುವ ಸೋಲೇ ಹೊರತು ನಿಜವಾದ ಸೋಲು ಅಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಪ್ರಮೋದ್ ಮಧ್ವ ರಾಜ್, ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ವಿಜಯ ಕುಮಾರ್, ಶೃಂಗೇರಿ ಶಾಸಕ ರಾಜೇಗೌಡ, ಮಾಜಿ ಶಾಸಕ ಗೋಪಾಲ ಭಂಡಾರಿ ಮಾತ ನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕ ಯು.ಆರ್.ಸಭಾಪತಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಮುಖಂಡರಾದ ಶಾಲಿನಿ ಶೆಟ್ಟಿ ಕೆಂಚನೂರು, ದಿಲೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಮೋದ್ರನ್ನು ಜೆಡಿಎಸ್ಗೆ ಕೊಟ್ಟದ್ದಕ್ಕೆ ಧನ್ಯವಾದಗಳು
ಪ್ರಮೋದ್ ಮಧ್ವರಾಜ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಕಳುಹಿಸಿಕೊಟ್ಟದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದಗಳು. ಅನಿವಾರ್ಯವಾಗಿ ನಾವು ಕೂಡ ಅವರನ್ನು ಬರ ಮಾಡಿಕೊಂಡಿದ್ದೇವೆ. ಬಂಗಾರಪ್ಪ ಅವರಿಗೆ ಎಲ್ಲ ಪಕ್ಷಗಳಲ್ಲೂ ಶಾಶ್ವತ ಅಭಿಮಾನಿಗಳಿದ್ದಾರೆ. ಬಿಜೆಪಿಯವರು ಕೂಡ ನಮಗೆ ಮತ ಹಾಕು ವಂತೆ ಮಾಡುವ ಶಕ್ತಿ ಪ್ರಮೋದ್ ರಿಗೆ ಇದೆ ಎಂದು ಶಿವಮೊಗ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಿಗೆ ಕೂಡಿ ಸಂಸತ್ತಿಗೆ ಹೋಗುವಂತೆ ಕಾರ್ಯಕರ್ತರು ಮಾಡಬೇಕು. ಈ ಬಾರಿ ನಾನು ಮತ್ತು ಪ್ರಮೋದ್ ಒಟ್ಟಿಗೆ ಸಂಸತ್ತಿಗೆ ಕಾಲಿರಿಸಲಿದ್ದೇವೆ ಎಂಬ ವಿಶ್ವಾಸ ಇದೆ. ಅದೇ ಕಾರಣಕ್ಕೆ ನಾನು ಕಳೆದ ಉಪಚುನಾವಣೆಯಲ್ಲಿ ಸೋತಿರಬಹುದೆಂದು ಅವರು ವ್ಯಂಗ್ಯವಾಡಿದರು.