ಸ್ಪೆಶಲ್ ಒಲಿಂಪಿಕ್ಸ್ನಲ್ಲಿ ಪದಕ ವಿಜೇತ ಶುಭಂಗೆ ಅಭಿನಂದನೆ
ಉಡುಪಿ, ಮಾ.25: ಅಬುಧಾಬಿಯಲ್ಲಿ ಇತ್ತೀಚೆಗೆ ನಡೆದ ವಿಶೇಷ ಮಕ್ಕಳ ಸ್ಪೆಶಲ್ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕರ್ನಾಟಕ ರಾಜ್ಯದ ಏಕೈಕ ಅಥ್ಲೆಟ್ಸ್ ಉಡುಪಿ ಆಶಾ ನಿಲಯ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿ ಶುಭಂ ಮನೋಜ್ ಶೆಟ್ಟಿ ಪದಕ ಗೆದ್ದು ಕೊಂಡಿದ್ದಾರೆ.
ಭಾರತ ದೇಶದ 299 (ಕರ್ನಾಟಕ ರಾಜ್ಯದಿಂದ 16 ಮಕ್ಕಳು) ವಿಶೇಷ ಮಕ್ಕಳು ಸೇರಿದಂತೆ ಒಟ್ಟು 177 ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದ ಸ್ಪೆಶಲ್ ಒಲಿಂಪಿಕ್ಸ್ನ ಶಾಟ್ಪುಟ್ನಲ್ಲಿ ನಾಲ್ಕನೆ ಹಾಗೂ 16ರಿಂದ 21ವರ್ಷ ವಯೋಮಿತಿಯ 4x100 ರಿಲೇಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿ ದ್ದಾರೆ. ಕರ್ನಾಟಕ ರಾಜ್ಯದ ಮಕ್ಕಳು 16 ಚಿನ್ನ, 19 ಬೆಳ್ಳಿ, 17 ಕಂಚು ಸೇರಿದಂತೆ ಒಟ್ಟು 52 ಪದಕಗಳನ್ನು ಗೆದ್ದುಕೊಂಡಿದ್ದು, ಭಾರತವು 362 ಪದಕಗಳೊಂದಿಗೆ ವಿಶ್ವದಲ್ಲಿಯೇ ಎರಡನೆ ಸ್ಥಾನ ಪಡೆದುಕೊಂಡಿದೆ.
ಆಶಾ ನಿಲಯ ಶ್ರೇಯೋಭಿವೃದ್ಧಿ ಸಮಿತಿಯ ವತಿಯಿಂದ ಆಶಾನಿಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಪದಕ ವಿಜೇತ ಶುಭಂ ಮನೋಜ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಆಶಾ ನಿಲಯ ಶ್ರೇಯೋಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ವಿಶೇಷ ಮಕ್ಕಳಿಗೆ ಅನುಕಂಪದ ಬದಲು ಅವಕಾಶ ಗಳನ್ನು ಕೊಟ್ಟರೆ ಯಾವುದೇ ರೀತಿಯ ಸಾಧನೆ ಮಾಡುತ್ತಾರೆ ಎಂಬುದಕ್ಕೆ ಶುಭಂ ಸಾಕ್ಷಿಯಾಗಿದ್ದಾನೆ. ಶಿಕ್ಷಕರು, ಪೋಷಕರು ಸೇರಿದಂತೆ ಎಲ್ಲ ಪ್ರೋತ್ಸಾಹದಿಂದ ಶುಭಂ ದೇಶದ ಕೀರ್ತಿ ಪಾತಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ದ್ದಾನೆ ಎಂದು ತಿಳಿಸಿದರು.
ಶುಭಂ ತಾಯಿ ಚಂದ್ರಿಕಾ ಶೆಟ್ಟಿ ಮಾತನಾಡಿ, ಆಶಾ ನಿಲಯ ಸಂಸ್ಥೆಯು ತನ್ನ ಮಗನಲ್ಲಿರುವ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸಿ ಈ ಮಟ್ಟಕ್ಕೆ ಬೆಳೆಸಿದೆ. ಇದರಲ್ಲಿ ನನ್ನ ಪಾತ್ರ ಏನು ಇಲ್ಲ. ಇದೆಲ್ಲವೂ ಆಶಾ ನಿಲಯ ಮತ್ತು ದೇವರ ಕೃಪೆ ಎಂದು ಗದ್ಗರಿತರಾದರು.
ಉಡುಪಿ ಸಿಎಸ್ಐ ಜ್ಯುಬಿಲಿ ಚರ್ಚ್ನ ಸಭಾ ಪಾಲಕ ಹಾಗೂ ಉಡುಪಿ ಪ್ರಾದೇಶಿಕ ಪರಿಷತಿನ ವಲಯಾಧ್ಯಕ್ಷ ರೆ.ಸ್ಟೀವನ್ ಸರ್ವೊತ್ತಮ ಬಂಗೇರ, ಕರ್ನಾಟಕ ಸದರ್ನ್ ಡಯಸಿಸ್ನ ಯೋಜನಾ ಸಂಯೋಜಕ ರೆಜಿನಾಲ್ಡ್ ಸೋನ್ಸ್, ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಅವಿನ್ಸ್ಟನ್ ಕರ್ಕಡ, ಶ್ರೇಯೋಭಿವೃದ್ಧಿ ಸಮತಿಯ ಕಾರ್ಯದರ್ಶಿ ಸ್ಟೀಫನ್ ಕರ್ಕಡ, ಕೋಶಾಧಿಕಾರಿ ದೇವಪುತ್ರ ಕೆಟ್ಯಾನ್ ಮುಖ್ಯ ಅತಿಥಿಗಳಾಗಿದ್ದರು.
ಆಶಾ ನಿಲಯದ ವಾರ್ಡನ್ ಪ್ರಸನ್ನಿ ಸೋನ್ಸ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಜಯ ವಿಜಯ ಕುಮಾರಿ ವಂದಿಸಿದರು. ಶೈಲಾ ಅಮ್ಮನ್ನಾ ಕಾರ್ಯಕ್ರಮ ನಿರೂಪಿಸಿದರು.