ಮರಳುಗಾರಿಕೆ ಸಮಸ್ಯೆಯಿಂದ ಕಂಗೆಟ್ಟ ಕುಟುಂಬ: ಜಿಲ್ಲಾಧಿಕಾರಿ ಬಳಿ ದಯಾಮರಣಕ್ಕೆ ಅನುಮತಿ ಕೇಳಿದ ರಾಘವೇಂದ್ರ
ಉಡುಪಿ, ಮಾ. 25: ಜಿಲ್ಲೆಯಲ್ಲಿ ಕಳೆದ ಐದಾರು ತಿಂಗಳಿನಿಂದ ಸಾಕಷ್ಟು ಮಂದಿಯನ್ನು ವಿವಿಧ ರೀತಿಯಲ್ಲಿ ಸಂಕಷ್ಟಕ್ಕೆ ನೂಕಿರುವ ಮರಳುಗಾರಿಕೆಗೆ ಪೂರ್ಣ ಪ್ರಮಾಣದಲ್ಲಿ ಅನುಮತಿ ನೀಡದಿರುವ ವಿಷಯ ಇದೀಗ ಕುಟುಂಬವೊಂದನ್ನು ಸಾವಿನಂಚಿಗೆ ತಂದು ನಿಲ್ಲಿಸಿದೆ.
ಉಡುಪಿಯಲ್ಲಿಂದು ಮರಳು ಹೋರಾಟ ಸಂಘಟನೆಯ ವತಿಯಿಂದ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮರಳು ಸಾಗಾಟ ಲಾರಿ ಯೂನಿಯನ್ನ ಕಾರ್ಯದರ್ಶಿಯಾಗಿರುವ ರಾಘವೇಂದ್ರ ಶೆಟ್ಟಿ ಅವರು ಮರಳುಗಾರಿಕೆಗೆ ಜಿಲ್ಲಾಡಳಿತ ಅನುಮತಿ ನೀಡಲು ಮೀನಮೇಷ ಎಣಿಸುತ್ತಿರುವುದರಿಂದ ತನ್ನ ಇಡೀ ಕುಟುಂಬ ಬದುಕುವುದೇ ದುಸ್ತರವಾಗಿದ್ದು, ಇದರಿಂದ ಜಿಲ್ಲಾದಿಕಾರಿಯರಿಗೆ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ ಮನವಿ ಸಲ್ಲಿಸಿರುವುದಾಗಿ ತಿಳಿಸಿ ಎಲ್ಲರನ್ನು ಅಚ್ಚರಿಗೊಳಿಸಿದರು.
ಕಣ್ಣೀರು ಹಾಕುತ್ತಲೇ, ನಡುನಡುವೆ ಬಿಕ್ಕಳಿಸುತ್ತಲೇ ತನ್ನ ಪರಿಸ್ಥಿತಿಯನ್ನು ಬಣ್ಣಿಸಿದ ರಾಘವೇಂದ್ರ ಶೆಟ್ಟಿ, ಇದೇ ಮಾ.22ಕ್ಕೆ ತಾನು ಸ್ವತಹ ಮಣಿಪಾಲದಲ್ಲಿ ರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಯವರಿಗೆ ತನಗೆ ಹಾಗೂ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ದಯಾಮರಣ ಕೋರುವ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು. ಆದರೆ ಜಿಲ್ಲಾಧಿಕಾರಿಯವರು ತನ್ನ ಕೋರಿಕೆಯನ್ನು ಹಗುರವಾಗಿ ತೆಗೆದುಕೊಂಡಿರುವುದು ಬೇಸರ ತಂದಿದೆ ಎಂದವರು ಬಿಕ್ಕಳಿಸುತ್ತಾ ನುಡಿದರು.
ತಾನು ಕಳೆದ ಸುಮಾರು ವರ್ಷಗಳಿಂದ ಯಾವುದೇ ಸರಕಾರಿ ಸೌಲಭ್ಯ ಪಡೆಯದೇ ನ್ಯಾಯಯುತವಾಗಿ ದುಡಿದು ಮರ್ಯಾದೆಯಿಂದ ಸಂಸಾರವನ್ನು ನಿಭಾಯಿಸಿಕೊಂಡು ಬಂದಿದ್ದೇನೆ. ಆದರೆ ಈಗ ನನ್ನ ಪರಿಸ್ಥಿತಿ ಅತ್ಯಂತ ದುಸ್ತರವಾಗಿದೆ. ಇದಕ್ಕೆ ಮರಳುಗಾರಿಕೆ ಪ್ರಾರಂಭಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ತೋರುವ ನಿರ್ಲಕ್ಷ ಹಾಗೂ ಸ್ವಪ್ರತಿಷ್ಠೆಯೇ ಕಾರಣ ಎಂದು ದೂರಿದರು.
ನಾಲ್ಕು ವರ್ಷಗಳ ಹಿಂದೆ ತನ್ನ ಬಳಿ ನಾಲ್ಕು ಟಿಪ್ಪರ್ ಲಾರಿಗಳಿದ್ದು, 12 ಮಂದಿ ತನ್ನ ಕೈಕೆಳಗೆ ಕೆಲಸ ಮಾಡುತಿದ್ದರು. ಈ ವಾಹನಗಳಲ್ಲಿ ಕಟ್ಟಡ ಸಾಮಗ್ರಿ ಸಾಗಿಸಿ ಜೀವನ ಸಾಗಿಸುತಿದ್ದೆವು. ಆದರೆ ಈಗ ನಾಲ್ಕು ವರ್ಷಗಳಿಂದ ಕೆಲ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಜಿಲ್ಲೆಯಲ್ಲಿ ಕೃತಕ ಮರಳಿನ ಅಭಾವ ಸೃಷ್ಟಿಸಿದ್ದು, ಇದರಿಂದ ನಮ್ಮ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ದೂರಿದರು.
ಮರಳಿನ ಅಭಾವ ಸೃಷ್ಟಿಯಾದಾಗಿನಂದ ನಮ್ಮ ಜೀವನದ ಮೇಲೆ ಗಂಭೀರ ಪರಿಣಾಮ ಬಿದ್ದು, ನಮ್ಮ ವಾಹನಗಳಿಗೆ ಕೆಲಸವಿಲ್ಲದೇ ಮನೆಯಲ್ಲೇ ನಿಲ್ಲಿಸಿಕೊಂಡು ವಾಹನಕ್ಕಾಗಿ ಮಾಡಿದ ಸಾಲವನ್ನು ತೀರಿಸಲಾಗಲಿಲ್ಲ. ಕೊನೆಗೆ ಬೇರೆ ಗತ್ಯಂತರವಿಲ್ಲದೇ ಒಂದೊಂದೇ ವಾಹನಗಲನ್ನು ಅಲ್ಪಮೊತ್ತಕ್ಕೆ ಮಾರಾಟ ಮಾಡಿ ಜೀವನ ಸಾಗಿಸಿಕೊಂಡು ಬಂದಿದ್ದೇವೆ ಎಂದು ಬಿಕ್ಕುತ್ತಾ ನುಡಿದರು.
ಈಗ ನಮ್ಮ ಬಳಿ ಒಂದು ಟಿಪ್ಪರ್ ವಾಹನವಿದ್ದು, ವಾಹನದ ಮೇಲೆ 7 ಲಕ್ಷ ರೂ.ಬ್ಯಾಂಕ್ ಸಾಲವಿದೆ. ನನ್ನ ಅಥವಾ ನನ್ನ ಕುಟುಂಬದ ಯಾರ ಹೆಸರಿ ನಲ್ಲಿಯೂ ಯಾವುದೇ ಆಸ್ತಿ-ಪಾಸ್ತಿ ಇಲ್ಲದ ಕಾರಣ ಕಳೆದ ಐದು ವರ್ಷಗಳ ಹಿಂದೆ ಇನ್ನಂಜೆ ಗ್ರಾಮದ ಕಟಪಾಡಿ ಕೆನರಾ ಬ್ಯಾಂಕ್ ಶಾಖೆಯಲ್ಲಿ 12 ಲಕ್ಷ ರೂ.ಸಾಲ ಪಡೆದು ಜಾಗ-ಮನೆಯನ್ನು ಸ್ವಂತದ್ದಾಗಿ ಮಾಡಿಕೊಂಡಿದ್ದೇನೆ.
ಮರಳುಗಾರಿಕೆ ಶುರುವಾದ ಮೇಲೆ ಮರಳಿಸುವ ನಿರೀಕ್ಷೆಯಲ್ಲಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಮಾರಿ, ಸ್ನೇಹಿತರಿಂದ ಕೈಸಾಲ ಪಡೆದು ಬ್ಯಾಂಕ್ ಸಾಲದ ಬಡ್ಡಿಯನ್ನು ಕಟ್ಟುತ್ತಾ ಬಂದಿದ್ದೇನೆ. ಆದರೆ ಈಗ ಮರಳುಗಾರಿಕೆ ಪ್ರಾರಂಭಗೊಳ್ಳದೇ ನನ್ನೆಲ್ಲಾ ಕನಸು ನುಚ್ಚುನೂರಾಗಿದೆ. ಈಗ ನನಗೆ ಬೇರೆ ದಾರಿ ಇಲ್ಲದೇ ಹೆಂಡತಿ ಮತ್ತು ಇಬ್ಬರು ಪುಟ್ಟ ಮಕ್ಕಳೊಂದಿಗೆ ಚರ್ಚಿಸಿ ದಯಾಮರಣ ಹೊಂದುವ ನಿರ್ಧಾರ ಮಾಡಿದ್ದೇನೆ.
ನನ್ನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ದಯಾಮರಣಕ್ಕೆ ರಾಜ್ಯ ಸರಕಾರದಿಂದ ಅಥವಾ ಸಂಬಂಧ ಪಟ್ಟ ನ್ಯಾಯಾಲಯದಿಂದ ಅನುಮತಿ ದೊರಕಿಸಿಕೊಡುವಂತೆ ಜಿಲ್ಲಾಧಿಕಾರಿಯವರಲ್ಲಿ ಕೋರಿರುವುದಾಗಿ ರಾಘವೇಂದ್ರ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಗಳ ಪದಾಧಿಕಾರಿಗಳಾದ ಅನ್ಸಾರ್ ಅಹಮ್ಮದ್, ಸತ್ಯರಾಜ್ ಬಿರ್ತಿ, ಚಂದ್ರ ಪೂಜಾರಿ, ಗೋಪಾನಾಥ್, ಸಮರ್ಥ್ ಮುಂತಾದವರು ಉಪಸ್ಥಿತರಿದ್ದರು.