ಸ್ಕೂಟರ್ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಹಣದ ಬ್ಯಾಗ್ ಕಳವು
ಮಂಗಳೂರು, ಮಾ.25: ನಗರದ ವೆನ್ಲಾಕ್ ಆಸ್ಪತ್ರೆ ಸಮೀಪ ವ್ಯಕ್ತಿಯೊಬ್ಬರು ಸ್ಕೂಟರ್ನಲ್ಲಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಹಣದ ಬ್ಯಾಗನ್ನು ಬೈಕ್ನಲ್ಲಿ ಬಂದ ಅಪರಿಚಿತರಿಬ್ಬರು ಕಳವು ಮಾಡಿ ಪರಾರಿಯಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ದೇರಳಕಟ್ಟೆ ನಿವಾಸಿ ಹಮೀದ್ ಹಣ ಕಳೆದುಕೊಂಡವರು.
ಹಮೀದ್ ಅವರು ಮಾ. 23ರಂದು ರಾತ್ರಿ 7:15ಕ್ಕೆ ಸ್ಕೂಟರನ್ನು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿ ರೈಲಿನಲ್ಲಿ ತಮಿಳುನಾಡಿಗೆ ಹೋಗಿದ್ದರು. ಅಲ್ಲಿ ಮೀನು ವ್ಯಾಪಾರಕ್ಕೆ ಸಂಬಂಧಿಸಿದ ಏಳು ಲಕ್ಷ ರೂ. ನಗದನ್ನು ಹ್ಯಾಂಡ್ಬ್ಯಾಗ್ನಲ್ಲಿ ಪಡೆದುಕೊಂಡು ಮಾ.24ರಂದು ಸಂಜೆ 6ಗಂಟೆಗೆ ತಮಿಳುನಾಡಿನಿಂದ ಹೊರಟಿದ್ದಾರೆ. ಮಾ.25ರಂದು ಬೆಳಗ್ಗೆ 5ಗಂಟೆಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಬಂದು ಇಳಿದು ಸ್ಕೂಟರ್ನ ಎದುರು ಭಾಗದಲ್ಲಿ ಹಣವಿಟ್ಟು ಮನೆಯತ್ತ ಹೊರಟಿದ್ದಾರೆ.
ನಸುಕಿನ ಜಾವ ಸುಮಾರು 5:25ರ ವೇಳೆ ವೆನ್ಲಾಕ್ ಆಸ್ಪತ್ರೆ ಎದುರು ಇರುವ ಟೆಂಪೋ ಕ್ಯಾಂಟೀನ್ನಲ್ಲಿ ಚಹಾ ಕುಡಿಯುತ್ತಿರುವ ಸಂದರ್ಭ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಹಮೀದ್ ಅವರನ್ನು ಯಾಮಾರಿಸಿ ಬ್ಯಾಗ್ ಕಸಿದು ಪಳ್ನೀರ್ನತ್ತ ಪರಾರಿಯಾಗಿದ್ದಾರೆ.
ಈ ಕುರಿತು ಮಂಗಳೂರು ನಗರ ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.