ಕ್ಯಾಟರಿಂಗ್ ಮೇಲಿನ ಶೇ.18 ಜಿಎಸ್ಟಿ ಕಡಿತ ಅಗತ್ಯ: ಸದಾಶಿವ ಶೆಟ್ಟಿ
ದ.ಕ. ಕ್ಯಾಟರಿಂಗ್ ಮಾಲಕರ ಅಸೋಸಿಯೇಶನ್ ಉದ್ಘಾಟನೆ
ಮಂಗಳೂರು, ಮಾ. 25: ‘ಹೊಟೇಲ್ಗಳ ಮೇಲಿನ ಜಿಎಸ್ಟಿ ತೆರಿಗೆಯನ್ನು ಶೇ.5ಕ್ಕೆ ಇಳಿಕೆ ಮಾಡಲಾಗಿದ್ದು, ಅದರಂತೆ ಕ್ಯಾಟರಿಂಗ್ಗಳ ಮೇಲಿನ ಶೇ.18ರ ಜಿಎಸ್ಟಿಯನ್ನು ಕಡಿತಗೊಳಿಸಲು ಸರಕಾರಕ್ಕೆ ಅಸೋಸಿಯೇಶನ್ ಬೇಡಿಕೆ ಸಲ್ಲಿಸಬೇಕು’ ಎಂದು ಶ್ರೀದೇವಿ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಸಲಹೆ ನೀಡಿದ್ದಾರೆ.
ನಗರದ ಪುರಭವನದಲ್ಲಿ ಸೋಮವಾರ ನಡೆದ ದ.ಕ. ಕ್ಯಾಟರಿಂಗ್ ಮಾಲಕರ ಅಸೋಸಿಯೇಶನ್ನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕ್ಯಾಟರಿಂಗ್ಗಳ ಮೇಲಿನ ತೆರಿಗೆಯನ್ನು ಕಡಿತಗೊಳಿದೇ ಇದ್ದಲ್ಲಿ ನಂ.2 ವ್ಯವಹಾರ ನಡೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹೆಚ್ಚುವರಿ ಜಿಎಸ್ಟಿ ತೆರಿಗೆಯಿಂದ ನೇರವಾಗಿ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಲಿದೆ’ ಎಂದು ಎಚ್ಚರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಯಾಟರಿಂಗ್ ಸಂಸ್ಥೆಗಳ ಸಂಘಟನೆ ಮಾಡಬೇಕು ಎಂಬ ಬಹುದಿನಗಳ ಕನಸು ನನಸಾಗಿರುವುದು ಸಂತಸದ ವಿಚಾರ. ಕ್ಯಾಟರಿಂಗ್ ಸಂಸ್ಥೆಗಳು ಗುಣಮಟ್ಟ ಕಾಯ್ದುಗೊಳ್ಳುವ ಮೂಲಕ ಗ್ರಾಹಕರಿಂದ ಇನ್ನಷ್ಟು ವಿಶ್ವಾಸ ಗಳಿಸಬೇಕು. ಬೆಂಗಳೂರು, ಮುಂಬೈ ಮುಂತಾದೆಡೆಯ ಕ್ಯಾಟರಿಂಗ್ ಸಂಸ್ಥೆಗಳ ಪ್ರಭಾವದಿಂದ ಈಗ ಮಂಗಳೂರಿನಲ್ಲೂ ಕ್ಯಾಟರಿಂಗ್ನ ಬೆಲೆ ಹೆಚ್ಚಿದೆ. ಕ್ಯಾಟರಿಂಗ್ ಸಂಸ್ಥೆಗಳ ನಡುವೆ ಸ್ಪರ್ಧೆಯ ಅಗತ್ಯವಿಲ್ಲ’ ಎಂದರು.
‘ಸುಮಾರು 45 ವರ್ಷಗಳ ಹಿಂದೆ ನಾನೂ ಕ್ಯಾಟರಿಂಗ್ ಮಾಡಿದ್ದೆ. ಆದರೆ ಆದಿನಗಳಲ್ಲಿ ಇಂತಹ ಆಧುನಿಕ ಸೌಲಭ್ಯಗಳಿರಲಿಲ್ಲ. ಟೇಬಲ್ ಹಾಕಿ ಗ್ರಾಹಕರಿಗೆ ಊಟ ನೀಡುತ್ತಿದ್ದೇವು. ಅಂತಹ ಪರಿಸ್ಥಿತಿ ಸದ್ಯ ಬದಲಾಗಿದೆ. ಎಲ್ಲದರಲ್ಲೂ ಆಧುನಿಕತೆ ಗೋಚರಿಸುತ್ತದೆ. ದ.ಕ. ಜಿಲ್ಲೆಯ ಎಲ್ಲ ಕ್ಯಾಟರಿಂಗ್ ನಡೆಸುವವರು ಒಗ್ಗೂಡಿ ಆರಂಭಿಸಿರುವ ಅಸೋಸಿಯೇಶನ್ ಗ್ರಾಹಕರಿಗೆ ಉತ್ತಮ ಸೇವೆ ನೀಡಲಿ’ ಎಂದು ಸಲಹೆ ನೀಡಿದರು.
ಮುಂಬೈನ ಕೆಇವೈಎಸ್ ಗ್ರೂಪ್ ಆಫ್ ಹೊಟೇಲ್ಸ್ನ ಹರೀಶ್ ಅಮೀನ್ ಅವರು ದ.ಕ. ಕ್ಯಾಟರಿಂಗ್ ಮಾಲಕರ ಅಸೋಸಿಯೇಶನ್ನ ಲಾಂಛನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ‘ದ.ಕ. ಜಿಲ್ಲೆಯ ಎಲ್ಲ ಕ್ಯಾಟರಿಂಗ್ನವರು ಒಂದೇ ವೇದಿಕೆಯಲ್ಲಿ ಕೂಡಿದ್ದಾರೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ತಲುಪಿಸಲಿ’ ಎಂದು ಶುಭ ಹಾರೈಸಿದರು.
ಎ.ಜೆ. ಸಮೂಹ ಸಂಸ್ಥೆ ಆಡಳಿತ ನಿರ್ದೇಶಕ ಡಾ. ಎ. ಜನಾರ್ದನ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯೆನೆಪೊಯ ವಿಶ್ವವಿದ್ಯಾಲಯದ ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಅಸೋಸಿಯೇಶನ್ನ ಸೇವಾ ಕಾರ್ಯಕ್ರಮ ಉದ್ಘಾಟಿಸಿದರು. ಮಾಂಡ್ ಸೊಭಾಣ್ ಮಂಗಳೂರು ಅಧ್ಯಕ್ಷ ಲುವಿ ಜೆ. ಪಿಂಟೊ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಬೆಂಗಳೂರಿನ ಚೆಫ್ಟಾಕ್ ಹಾಸ್ಪಿಟಾಲಿಟಿಯ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಬಾಬು ಪೂಜಾರಿ ಹಾಗೂ ಚಲನಚಿತ್ರ ನಟ ಡಾ.ರಾಜಶೇಖರ್ ಕೋಟ್ಯಾನ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ದ.ಕ. ಕ್ಯಾಟರಿಂಗ್ ಮಾಲಕರ ಅಸೋಸಿಯೇಶನ್ನ ಅಧ್ಯಕ್ಷ ಸತೀಶ್ ಬೋಳಾರ್, ಗೌರವ ಅಧ್ಯಕ್ಷರಾದ ಸುಧಾಕರ್ ಕಾಮತ್, ಫೆಲಿಕ್ಸ್ ವೇವಲ್ ಲಸ್ರಾದೋ, ಮುಹಮ್ಮದ್ ಇಕ್ಬಾಲ್, ಅಸೋಸಿಯೇಶನ್ನ ಉಪಾಧ್ಯಕ್ಷ ರಾಜೇಶ್ ಕೆ., ಗೋಕುಲ್ ಕದ್ರಿ, ಪ್ರಧಾನ ಕಾರ್ಯದರ್ಶಿ ದೀಪಕ್ ಕೋಟ್ಯಾನ್ ಗುರುಪುರ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ದೀಪಕ್ ರೈ ಪಾಣಾಜೆ, ಜೆ.ಪಿ. ತುಮಿನಾಡು, ರಾಜೇಶ್ ಮುಗುಳಿ ಅಭಿನಯದ ತೆಲಿಕೆ ಬಂಜಿ ನಿಲಿಕೆ ಎಂಬ ತುಳು ಹಾಸ್ಯ ಕಾರ್ಯಕ್ರಮ, ಭಾರತಿ ವಿಜಯ್ ತಂಡದವರಿಂದ ನವಶಕ್ತಿ ವೈಭವ ನೃತ್ಯ ರೂಪಕ, ಸಂಗೀತ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅನುಷಾ ಶೇಟ್ ಪ್ರಾರ್ಥಿಸಿದರು. ಖಜಾಂಚಿ ಯಶವಂತ್ ಪೂಜಾರಿ ಸ್ವಾಗತಿಸಿದರು. ನರೇಶ್ ಸಸಿಹಿತ್ಲು, ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.