ಮಾ.30: ಸ್ಟೆಮ್ಸೆಲ್ ದಾನಿಗಳ ನೋಂದಣಿ ಕಾರ್ಯಕ್ರಮ
ಮಂಗಳೂರು, ಮಾ.26: ರಕ್ತ ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳಿಗೆ ಮರು ಜೀವ ನೀಡುವ ನಿಟ್ಟಿನಲ್ಲಿ ಸ್ಟೆಮ್ಸೆಲ್ ದಾನಿಗಳ ನೋಂದಣಿ ಕಾರ್ಯಕ್ರಮವು ಮಾ.30 ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಕೊಡಿಯಾಲ್ ಬೈಲ್ ಕೆನರಾ ಹೈಸ್ಕೂಲ್ನ ಭುವನೇಂದ್ರ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸ್ಟೆಮ್ ಸೆಲ್ ರಿಜಿಸ್ಟ್ರಿ ಇಂಡಿಯಾದ ಡೋನರ್ ರಿಕ್ರೂಟ್ಮೆಂಟ್ ಮುಖ್ಯಸ್ಥೆ ಶಾಲಿನಿ ಗಂಭೀರ್ ಹೇಳಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಾನಿಗಳ ನೋಂದಣಿ ಪ್ರಮುಖ ಅಂಶವಾಗಿದ್ದು, ಈ ದಾನಿಗಳೇ ರೋಗಿಗಳಿಗೆ ಮರುಜನ್ಮ ನೀಡುವ ಭರವಸೆಯಾಗಿದೆ. 18 ವರ್ಷ ಮೇಲ್ಪಟ್ಟವರು ನೋಂದಣಿ ಮಾಡಿಸಬಹುದಾಗಿದೆ. ನೋಂದಣಿ ಮಾಡಿದ ವ್ಯಕ್ತಿಯನ್ನು 61 ವರ್ಷದವರೆಗೆ ವಿವಿಧ ದೇಶಗಳ ರೋಗಿಗಳಿಗಾಗಿ ಸಂಪರ್ಕಿಸುತ್ತಾರೆ. ವಿಶ್ವದಲ್ಲಿ 33 ಮಿಲಿಯನ್ ಮಂದಿ ಸ್ಟೆಮ್ಸೆಲ್ ದಾನಿಗಳು ನೋಂದಣಿ ಮಾಡಿಸಿದ್ದು, ಇದರಲ್ಲಿ ಭಾರತೀಯರ ಸಂಖ್ಯೆ ಅತಿ ಕಡಿಮೆ. ಅದ್ದರಿಂದ ಎನ್ನೆಸ್ಸೆಸ್, ಎನ್ಸಿಸಿ ವಿದ್ಯಾರ್ಥಿಗಳು ನೋಂದಣಿಗೆ ಮುಂದಾಗಬೇಕು ಎಂದರು.
ಕೆನರಾ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲೆ ಜಾಯ್ ಜೆ.ರೈ ಮಾತನಾಡಿ, ಕೆನರಾ ಸಿಬಿಎಸ್ಇ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ (37) ತೀವ್ರ ಮೈಲೋಯ್ಡಾ ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್)ದಿಂದ ಬಳಲುತಿದ್ದು, ಪ್ರಸ್ತುತ ಕಿಮೋಥೆರಪಿ ಪ್ರಗತಿಯಲ್ಲಿದೆ. ರಕ್ತ ಕಾಂಡದ ಕಸಿಯ ಮೂಲಕ ಪ್ರಶಾಂತ್ಗೆ ಜೀವನದಲ್ಲಿ ಎರಡನೇ ಅವಕಾಶ ಸಿಗುತ್ತದೆ ಇದಕ್ಕಾಗಿ ಸ್ಟೆಮ್ಸೆಲ್ ದಾನಿಗಳ ಅವಶ್ಯಕತೆಯಿದೆ. ಆದ್ದರಿಂದ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸ್ಟೆಮ್ಸೆಲ್ ದಾನಿಗಳ ನೋಂದಣಿಗೆ ಮುಂದಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್ರ ತಂದೆ ಸುರೇಂದ್ರ ಬಾಬುಗುಡ್ಡೆ ಉಪಸ್ಥಿತರಿದ್ದರು.