ಅಶೋಕ್ ಶೆಟ್ಟಿಗೆ ಗೌರವ ಡಾಕ್ಟರೇಟ್
ಮಂಗಳೂರು, ಮಾ.26: ಬೆಂಗಳೂರಿನ ಇಂಡಿಯನ್ ವರ್ಚುವಲ್ ಅಕಾಡಮಿ ಫಾರ್ ಪೀಸ್ ಆ್ಯಂಡ್ ಎಜ್ಯುಕೇಶನ್ ವತಿಯಿಂದ ಮುಂಬೈಯ ಭಾರತೀಯ ವಿದ್ಯಾಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಮೂಹ ಸಂವಹನ (ಪತ್ರಿಕೋದ್ಯಮ, ರಂಗಭೂಮಿ, ಸಾಹಿತ್ಯ, ಸಂಘಟನೆ, ಸಮಾಜಸೇವೆ)ದಲ್ಲಿನ ಸೇವೆಗಾಗಿ ಅಶೋಕ್ ಶೆಟ್ಟಿ ಬಿ.ಎನ್. ಅವರಿಗೆ ಐವಿಎಪಿಯ ಅಧ್ಯಕ್ಷ ರೆ.ಡಾ.ಡೇನಿಯಲ್ ಎಡ್ವಿನ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಸಮಾರಂಭದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಕೇಂದ್ರ ಸಚಿವ ರಾಮದಾಸ್ ಅತಾವಾಲೆ, ಮುಂಬೈನ ಪಿಸಿಆರ್ ವಿಭಾಗದ ವಿಶೇಷ ಐಜಿಪಿ ಎಂ.ಡಿ. ಖೈಸರ್ ಖಾಲಿದ್, ಐವಿಎಪಿಯ ಡೀನ್ ಡಾ.ಜಾನ್ ಲೆಸ್ಲಿ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಅಶೋಕ್ ಶೆಟ್ಟಿ ಬಿ.ಎನ್. ಅವರು ಕಳೆದ 25 ವರ್ಷಗಳಿಂದ ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಸಮಾಜಸೇವಾ ಸಂಸ್ಥೆ ಎನ್ಎಸ್ಸಿಡಿಎಫ್ನ ಟ್ರಸ್ಟಿಯಾಗಿದ್ದಾರೆ. ರಂಗಭೂಮಿಯಲ್ಲಿ ನಾಟಕಕಾರ, ನಟ, ನಿರ್ದೇಶಕರಾಗಿ 10 ನಾಟಕಗಳನ್ನು ಬರೆದು ಪ್ರದರ್ಶಿಸಿದ್ದಾರೆ. ಇವರ 'ಅಮ್ಮ' ಕನ್ನಡ ನಾಟಕಕ್ಕೆ ಉಡುಪಿ 'ರಂಗಭೂಮಿ'ಯು 1999ರಲ್ಲಿ ಸಂಯೋಜಿಸಿದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಮೆಚ್ಚುಗೆ ಪ್ರಶಸ್ತಿ ದೊರಕಿದೆ.
'ಒಂಜಪ್ಪೆಜೋಕುಲು' ಮತ್ತು 'ವಂದೇ ಮಾತರಂ' ನಾಟಕಗಳು 100ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದ್ದು, ರಾಷ್ಟ್ರೀಯ ಭಾವೈಕ್ಯ ಸಾರುವ ಈ ನಾಟಕಗಳಿಗೆ ಸರ್ವಧರ್ಮ ಸಮ್ಮೇಳನ ಪ್ರಶಸ್ತಿ, ಸ್ವರ್ಣಜಯಂತಿ ಪ್ರಶಸ್ತಿಗಳು ಲಭಿಸಿವೆ. ಸಾಹಿತ್ಯ ಕ್ಷೇತ್ರದಲ್ಲಿ 'ಸವ್ಯಸಾಚಿ ಪುನರೂರು' ಮತ್ತು ಪುನರೂರು 75 ಕೃತಿಗಳು ಸಾಹಿತ್ಯಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.