ಬ್ರಹ್ಮಶ್ರೀ ನಾರಾಯಣ ಗುರುಗಳ 13ನೇ ಪ್ರತಿಷ್ಠಾ ವರ್ಧಂತಿ ಉತ್ಸವ
ಪುತ್ತೂರು: ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 13ನೇ ಪ್ರತಿಷ್ಠಾ ವರ್ಧಂತಿ ಉತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮಂಗಳವಾರ ನಡೆಯಿತು.
13 ವರ್ಷಗಳ ಹಿಂದೆ ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಷ್ಠೆ ಇಲ್ಲಿ ನಡೆದಿದ್ದು, ಇದಾದ ಬಳಿಕ ಪ್ರತೀ ವರ್ಷ ಅದೇ ದಿನ ಪ್ರತಿಷ್ಠಾ ವರ್ಧಂತಿ ನಡೆಸಿಕೊಂಡು ಬರಲಾಗುತ್ತಿದೆ.
ವರ್ಧಂತಿ ಉತ್ಸವದಲ್ಲಿ ಮುಂಜಾನೆ ಸ್ವಸ್ತಿ ಪುಣ್ಯಾಹ, ಗಣಪತಿ ಹೋಮ, ನವಕ ಕಲಶಾಭಿಷೇಕ, ಬ್ರಹ್ಮಶ್ರೀ ನಾರಾಯಣ ಗುರುಗಳ ಸಹಸ್ರ ನಾಮಾವಳಿ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಮಧ್ಯಾಹ್ನ ಮಹಾಪೂಜೆ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಕಾರ್ಯ ನಿರ್ವಹಣಾ ಅಧಿಕಾರಿ ಆರ್.ಸಿ. ನಾರಾಯಣ್ ರೆಂಜ ಅವರ ನೇತೃತ್ವದಲ್ಲಿ ಎಲ್ಲ ಧಾರ್ಮಿಕ ವಿಧಿ ವಿಧಾನಗಳು ನಡೆದವು. ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಜಯಂತ ನಡುಬೈಲ್, ತಾಲೂಕಿನ ಬಿಲ್ಲವ ಗ್ರಾಮ ಸಮಿತಿಗಳ ಪದಾಧಿಕಾರಿಗಳು, ತಾಲೂಕು ಬಿಲ್ಲವ ಸಂಘ, ಬಿಲ್ಲವ ಮಹಿಳಾ ವೇದಿಕೆ, ಯುವವಾಹಿನಿ ಘಟಕಗಳ ಪ್ರಮುಖರು, ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪೂಜೆಯಲ್ಲಿ ಪಾಲ್ಗೊಂಡರು.