ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ: ನಿರ್ಮಲ ಸೀತಾರಾಮನ್
ಉಡುಪಿ, ಮಾ.26: ಪುಲ್ವಾಮ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಸೈನ್ಯದ ಬೆಂಬಲದಲ್ಲಿ ನಡೆಯುತ್ತಿರುವ ಆತ್ಮಾಹುತಿ ಬಾಂಬರ್ಗಳ ಭಯೋತ್ಪಾದನಾ ಶಿಬಿರವನ್ನೇ ಧ್ವಂಸ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ತೋರಿಸಿಕೊಟ್ಟರು. ಇಂತಹ ಪ್ರಧಾನಿ ನಮಗೆ ಬೇಕು ಎಂದು ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಕಡಿಯಾಳಿಯ ಬಿಜೆಪಿ ಕಚೇರಿ ಬಳಿ ಮಂಗಳವಾರ ಹಮ್ಮಿಕೊಳ್ಳಲಾದ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಪುಲ್ವಾಮ ದಾಳಿಯ ನಂತರ ಅದೇ ರೀತಿಯ ಆತ್ಮಾಹುತಿ ಬಾಂಬ್ ದಾಳಿ ಯು ಇಡೀ ದೇಶಾದ್ಯಾಂತ ಸಂಭವಿಸುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ದೊರೆಯಿತು. ಮುಂಬೈ ದಾಳಿಯ ನಂತರ ಯುಪಿಎ ಸರಕಾರ ಮಾಡಿ ದಂತೆ ಭಯೋತ್ಪಾದನೆ ವಿರುದ್ಧ ನಾವು ಕೂಡ ಯಾವುದೇ ಕ್ರಮ ತೆಗೆದುಕೊಳ್ಳದಿರುತ್ತಿದ್ದರೆ ಇಡೀ ದೇಶ ನಮ್ಮನ್ನು ಕ್ಷಮಿಸುತ್ತಿರಲಿಲ್ಲ. ಅದಕ್ಕೆ ಪ್ರಧಾನಿ ಅದರ ವಿರುದ್ಧ ಕ್ರಮ ಕೈಗೊಂಡರು ಎಂದರು.
ಪಾಕಿಸ್ತಾನ ಪ್ರತಿ ಬಾರಿಯೂ ನಾವು ಭಯೋತ್ಪಾದನೆಯ ಸಂತ್ರಸ್ತರು ಅಂತ ಹೇಳುತ್ತ ಬರುತ್ತಿದೆ. ಹಾಗಾದರೆ ಅವರು ಯಾಕೆ ಈವರೆಗೆ ಭಯೋತ್ಪಾದನೆ ವಿರುದ್ದ ಕ್ರಮ ಕೈಗೊಂಡಿಲ್ಲ ಎಂಬುದೇ ನಮ್ಮ ಪ್ರಶ್ನೆ ಎಂದ ಅವರು ಸೈನ್ಯಕ್ಕೆ ನಾವು ಸಂಪೂರ್ಣ ಸ್ವಾತಂತ್ರ ನೀಡಿದ್ದೇವೆ. ಮುಂಬೈ ದಾಳಿಯ ನಂತರ ಯುಪಿಎ ಸರಕಾರ ಇದೇ ರೀತಿ ಸೈನ್ಯಕ್ಕೆ ಸ್ವಾತಂತ್ರ ಕೊಡುತ್ತಿದ್ದರೆ ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವ ಕಾರ್ಯವನ್ನು ನಿಲ್ಲಿಸುತ್ತಿತ್ತು. ಆದರೆ ಯುಪಿಎ ಸರಕಾರ ಅದನ್ನು ಮಾಡಿಲ್ಲ ಎಂದು ಟೀಕಿಸಿದರು.
ಕಳೆದ 60 ವರ್ಷಗಳಿಂದ ಬಡತನ ನಿರ್ಮೂಲನೆ ಮಾಡದ ಕಾಂಗ್ರೆಸ್ ಈ ಬಾರಿ ನ್ಯಾಯ ಎಂಬ ಹೊಸ ಯೋಜನೆಯನ್ನು ತಯಾರಿಸಿದೆ. ಕಾಂಗ್ರೆಸ್ ಬಡತನ ನಿರ್ಮೂಲನೆಗೆ ನ್ಯಾಯ ಎಂಬ ಶಬ್ದ ಬಳಕೆ ಮಾಡುವುದೇ ದೊಡ್ಡ ತಪ್ಪು. ಕಳೆದ 60ವರ್ಷಗಳಿಂದ ಬಡತನ ನಿರ್ಮೂಲನೆ ಮಾಡಲು ಸಾಧ್ಯವಾಗದ ಕಾಂಗ್ರೆಸ್ಗೆ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಡವರ ನೆನಪಾಗುತ್ತಿದೆ ಎಂದು ಅವರು ದೂರಿದರು.
ಮಹಾಘಟ್ ಬಂಧನ ಪದೇ ಪದೇ ಮೋದಿಯನ್ನು ಕಿತ್ತೊಗೆಯುವ ವಿಚಾರ ವನ್ನು ಹೇಳುತ್ತಿದೆ. ಇವರು ಮೋದಿಯನ್ನು ತೆಗೆದು ಆ ಸ್ಥಾನಕ್ಕೆ ಯಾರನ್ನು ಕುಳಿತು ಕೊಳ್ಳಿಸುತ್ತಾರೆ. ಅನುಭವ, ನಾಯಕತ್ವ, ಕ್ಷಮತೆ ಇಲ್ಲದ ರಾಹುಲ್ ಗಾಂಧಿ, ಪ್ರಧಾನಿ ಆಗುವ ಕನಸು ಕಾಣುತ್ತಿದ್ದಾರೆ. ಅದು ಕನಸಾಗಿಯೇ ಉಳಿಯುತ್ತದೆ ಹೊರತು ಸಫಲವಾಗುವುದಿಲ್ಲ. ಸಮರ್ಥರಲ್ಲದ ರಾಹುಲ್ ಗಾಂಧಿಯನ್ನು ಮೋದಿ ಜೊತೆ ಹೊಲಿಕೆ ಮಾಡಲು ಸಾಧ್ಯವಿಲ್ಲ ಎಂದರು.
ಕರ್ನಾಟಕ ಬಿಜೆಪಿ ಉಸ್ತುವಾರಿ ಕಿರಣ್ ಮಹೇಶ್ವರಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಚಿಕ್ಕ ಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್, ಸುನೀಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾ ಕರ ಹೆಗ್ಡೆ ಮಾತನಾಡಿದರು.
ವೇದಿಕೆಯಲ್ಲಿ ಶಾಸಕರಾದ ಲಾಲಾಜಿ ಆರ್.ಮೆಂಡನ್, ಕುಮಾರಸ್ವಾಮಿ, ಸುರೇಶ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ್ ಶೆಟ್ಟಿ, ಬೆಳ್ಳಿ ಪ್ರಕಾಶ್, ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ಜೀವರಾಜ್, ಮುಖಂಡರಾದ ಭಾರತಿ ಶೆಟ್ಟಿ, ದಿನಕರ ಬಾಬು ಮೊದಲಾದವರು ಉಪಸ್ಥಿತರಿದ್ದರು.
ಜಯಪ್ರಕಾಶ್ ಹೆಗ್ಡೆ ಗೈರು !
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಯಾಗಿದ್ದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಇಂದಿನ ಬಿಜೆಪಿ ಸಮಾವೇಶಕ್ಕೆ ಗೈರು ಹಾಜರಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಉಡುಪಿಯಲ್ಲಿ ಮಾ.25ರಂದು ಮಾಧ್ಯಮದವರೊಂದಿಗೆ ಮಾತನಾಡಿದ ಹೆಗ್ಡೆ, ಈಗಾಗಲೇ ಅಭ್ಯರ್ಥಿಯ ಆಯ್ಕೆಯಾಗಿದೆ. ಆದುದದಿಂದ ಇನ್ನು ಅವರ ಪರ ಪ್ರಚಾರ ನಡೆಸುವ ಕಾರ್ಯ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇಂದಿನ ಸಮಾವೇಶದಲ್ಲಿ ಮಾತ್ರ ಅವರ ಅನುಪಸ್ಥಿತಿ ಎದ್ದು ಕಾಣುತಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ ‘ಅವರನ್ನು ಸಮಾವೇಶಕ್ಕೆ ಕರೆದಿದ್ದೇನೆ. ಆದರೆ ಅವರು ಈಗ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ನನ್ನ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದರು’ ಎಂದು ತಿಳಿಸಿದರು.