ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ: ಐವನ್ ಡಿಸೋಜಾ
ಲೋಕಸಭಾ ಚುನಾವಣೆ
ಮಂಗಳೂರು, ಮಾ.26: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯನ್ನು ಪ್ರಮುಖವಾಗಿಸಿಕೊಂಡು ಜೆಡಿಎಸ್ ಸಹಕಾರದೊಂದಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ಎರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.
ರೈಲ್ವೇ ವಲಯ ರಚನೆ, ಬಂದರು ಅಭಿವೃದ್ಧಿ, ವಿಮಾನ ನಿಲ್ದಾಣದ ಖಾಸಗೀಕರಣ ಹಿಂಪಡೆದು ಅಭಿವೃದ್ಧಿ, ಐಐಟಿ ಸ್ಥಾಪನೆ, ವಿಜಯ ಬ್ಯಾಂಕ್ ಹೆಸರು ಉಳಿಕೆ ಸೇರಿದಂತೆ ಹಲವಾರು ಯೋಜನೆ ರೂಪಿಸಿ, ಕಾಂಗ್ರೆಸ್ ಗೆದ್ದರೆ ಶೀಘ್ರ ಅನುಷ್ಠಾನಕ್ಕೆ ತರಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಅವರು ಹೇಳಿದರು.
ಅಭ್ಯರ್ಥಿಯಾಗಿ ಮಿಥುನ್ ರೈ ನಿಂತ ಬಳಿಕ ಹೊಸ ಅಲೆ ಸೃಷ್ಟಿಯಾಗಿದೆ. ಇದನ್ನು ಕೊನೆ ತನಕ ಕೊಂಡೊಯ್ದು ಮತಗಳನ್ನಾಗಿ ಪರಿವರ್ತಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಸಂಸದ ನಳಿನ್ ಕುಮಾರ್ ಕಟೀಲ್ ನಿಷ್ಕ್ರಿಯರಾಗಿದ್ದರೂ ಚೌಕಿದಾರ್ ಪೇಟ ಹಾಕಿ ಸುತ್ತುತ್ತಿದ್ದಾರೆ. ಕ್ಷೇತ್ರದಲ್ಲಿ 10 ವರ್ಷ ಸಂಸದರೇ ಇಲ್ಲದ ಪರಿಸ್ಥಿತಿ ಇತ್ತು. ಮಿಥುನ್ ಅವರನ್ನು ಗೆಲ್ಲಿಸಿ, ಖಾಲಿ ಸ್ಥಾನ ತುಂಬಿಸುವ ಕೆಲಸ ಮಾಡಲಾಗುವುದು ಎಂದರು.
ದೇಶದಲ್ಲಿ ಬಡವರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂದು ಭರವಸೆ ನೀಡಿ ಪ್ರಧಾನಿ ನರೇಂದ್ರ ಮೋದಿ ಮೋಸ ಮಾಡಿದ್ದರೆ, ನುಡಿದಂತೆ ನಡೆಯುತ್ತಾ ಬಂದಿರುವ ಕಾಂಗ್ರೆಸ್, ಈ ಬಾರಿ 15 ಕೋಟಿ ಬಡವರಿಗೆ ಮಾಸಿಕ 6 ಸಾವಿರ ರೂ.ನಂತೆ ವಾರ್ಷಿಕ 72 ಸಾವಿರ ರೂ. ನೀಡಲು ನಿರ್ಧರಿಸಿದೆ. ಬಡತನ ನಿರ್ಮೂಲನದಲ್ಲಿ ಇದು ನಿರ್ಣಾಯಕ ಯೋಜನೆಯಾಗಲಿದೆ ಎಂದರು.
ಐದು ವರ್ಷಗಳ ಹಿಂದೆ ಚಾಯ್ವಾಲಾ ಆಗಿದ್ದವರು ಈಗ ಚೌಕೀದ್ದಾರೆ. ಇದು ಯಾವ ರೀತಿಯ ಮೋಸ. ಚಾಯ್ವಾಲಾ ಚೌಕೀದಾರ್ ಹೇಗಾಗುತ್ತಾರೆ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಶಾಹುಲ್ ಹಮೀದ್ ಕೆ.ಕೆ., ಸಿ.ಎಂ. ಮುಸ್ತಾ, ಆರ್ಿ ಬಾವಾ, ಪ್ರೇಮ್ ಬಲ್ಲಾಳ್ಬಾಗ್, ಪಿಯುಶ್ ತೊಕ್ಕೊಟ್ಟು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಹೌದು ಮಿಥುನ್ ಬಚ್ಚಾ !
ಮಿಥುನ್ ರೈ ಬಚ್ಚಾ ಎಂಬ ಶಾಸಕ ಸುನಿಲ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಐವನ್ ಡಿಸೋಜ, ಹೌದು ಮಿಥುನ್ ಬಚ್ಚ. ನಿಮ್ಮಂತೆ ಸುಳ್ಳು ಹೇಳುವುದಕ್ಕಿಂತ ಸಾಧನೆ ಮಾಡುವ ತಾಕತ್ತು ಇದೆ. ನೀವು ಶಾಸಕರಾದಾಗ ನಿಮ್ಮ ಪ್ರಾಯ ಎಷ್ಟಿತ್ತು ? ಜಿಲ್ಲೆಯಲ್ಲಿ ಏನೂ ಅನುಭವ ಇಲ್ಲದವರು ಶಾಸಕರಾಗಿಲ್ಲವೇ ಎಂದು ಪ್ರಶ್ನಿಸಿದರು.