ಬಿಜೆಪಿ ಚುನಾವಣಾ ಪ್ರಚಾರಕ್ಕೆ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ: ಸಂಜೀವ ಮಟಂದೂರು
ಮಂಗಳೂರು, ಮಾ. 26: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ರಾಷ್ಟ್ರೀಯ ಮುಖಂಡರು ಆಗಮಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟಂದೂರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಲೋಕ ಸಭಾ ಚುನಾವಣಾ ಪ್ರಚಾರಕ್ಕೆ ಒಬ್ಬರು ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಆಗಮನದ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಎರಡು ಬಾರಿ ಜಯಗಳಿಸಿ ತಮ್ಮ ಕ್ಷೇತ್ರದಲ್ಲಿ ಉತ್ತಮವಾಗಿ ಅಭಿವೃದ್ಧಿ ಕೆಲಸವನ್ನು ಮಾಡಿದ ನಳಿನ್ ಕುಮಾರ್ ಕಟೀಲ್ ಈ ಬಾರಿಯೂ 2ಲಕ್ಷ ಮತಗಳ ಅಂತರಿಂದ ಜಯಗಳಿಸುತ್ತಾರೆ ಎಂದು ಸಂಜೀವ ಮಟಂದೂರು ತಿಳಿಸಿದ್ದಾರೆ.
55 ಸಾರ್ವಜನಿಕ ಕಾರ್ಯಕ್ರಮ :- ಲೋಕ ಸಭಾ ಕ್ಷೇತ್ರದಲ್ಲಿ ಎಪ್ರಿಲ್ ಒಂದರಿಂದ 55 ಸಾರ್ವಜನಿಕ ಪ್ರಚಾರ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಂಜೀವ ಮಟಂದೂರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ವಿಧಾನ ಸಭೆಯ ಸಂದರ್ಭದಲ್ಲಿ ನಿಯೋಜಿಸಲಾದ ಪೇಜ್ ಪ್ರಮುಖರ ಸಮಾವೇಶವನ್ನು ಈ ಬಾರಿಯೂ ಹಮ್ಮಿಕೊಳ್ಳಲಾಗುವುದು. ಪ್ರತಿ ಶಕ್ತಿ ಕೇಂದ್ರದಲ್ಲೂ ಪ್ರಚಾರ ಕಾರ್ಯ ನಡೆಯಲಿದೆ ಎಂದಿದ್ದಾರೆ.
ಬಿಜೆಪಿ ತನ್ನ ಸಾಧನೆಯ ಬಲದಿಂದ ಜಯಗಳಿಸಲಿದೆ;- ಈ ಹಿಂದೆ ಕಾಂಗ್ರೆಸ್ನ ಹಿರಿಯ ರಾಜಕಾರಣಿಗಳ ವಿರುದ್ಧ ಸ್ಪರ್ಧಿಸಿ ಜಯಗಳಿಸಿರುವ ನಳಿನ್ ಕುಮಾರ್ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯಿಂದ ಹಾಗೂ ಕ್ಷೇತ್ರದಲ್ಲಿ ನಳಿನ್ ಕುಮಾರ್ ಅವರು ಮಾಡಿರುವ ಅಭಿವೃದ್ಧಿ ಯೋಜನೆಯ ಕಾರಣದಿಂದ ಬಿಜೆಪಿ ಬಲ ವೃದ್ಧಿಸಿಕೊಂಡಿದೆ. ಬಿಜೆಪಿ ದ.ಕ ಲೋಕ ಸಭಾ ಕ್ಷೇತ್ರದಲ್ಲಿ ತನ್ನ ಸ್ವ ಸಾಮಥ್ಯದಿಂದ ಜಯಗಳಿಸಲಿದೆ ಎಂದು ಸಂಜೀವ ಮಟಂದೂರು ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಶಾಸಕರಾದ ಅಂಗಾರ, ಡಾ.ಭರತ್ ಶೆಟ್ಟಿ , ಹರೀಶ್ ಪೂಂಜಾ ಹಾಗೂ ಬಿಜೆಪಿ ಮುಖಂಡರಾದ ಜಿತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.